ಸೆ.3 ಸೌಜನ್ಯ ನ್ಯಾಯಕ್ಕಾಗಿ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಪ್ರತಿಭಟನೆ: ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಕ್ರಮ ವಹಿಸಲು ಶಾಂತಿಪ್ರಿಯ ನಾಗರಿಕರಿಂದ ತಹಶೀಲ್ದಾರ್ ಮೂಲಕ ಮನವಿ


ಬೆಳ್ತಂಗಡಿ:
ಸೌಜನ್ಯ ನ್ಯಾಯಕ್ಕಾಗಿ ಆಗ್ರಹಿಸಿ ಸೆ.03ರಂದು ಬೆಳ್ತಂಗಡಿಯಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಲಿದ್ದು ಈ ಪ್ರತಿಭಟನೆಯಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡದಂತೆ ಕ್ರಮ ವಹಿಸಲು ವಿನಂತಿಸಿ ತಹಶೀಲ್ದಾರ್ ಮೂಲಕ ವಿವಿಧ ಇಲಾಖೆಗಳಿಗೆ ಆ.31ರಂದು ಬೆಳ್ತಂಗಡಿ ತಾಲೂಕಿನ ಶಾಂತಿ ಪ್ರಿಯರು ಮನವಿ ನೀಡಿದ್ದಾರೆ.

ಪ್ರತಿಭಟನಾ ಸಭೆಯ ಸಂಘಟಕರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಾದ ಜಗದೀಶ, ಪ್ರಭಾ.ಎಲ್ ಬೆಳವಂಗಲ, ಬಿ.ಎಂ.ಭಟ್, ವಿಠಲ ಗೌಡ ಹಾಗೂ ಒಡನಾಡಿ ಸಂಸ್ಥೆ ಇವರುಗಳು ಅವಹೇಳನಕಾರಿಯಾದ ಮಾತುಗಳನ್ನು ಆಡದಂತೆ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದ್ದು ನ್ಯಾಯಾಲಯದ ಈ ಆದೇಶಗಳನ್ನು ಸಂಘಟಕರು ಉಲ್ಲಂಘಿಸದಂತೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ , ದ.ಕ ಜಿಲ್ಲಾಧಿಕಾರಿಯವರಿಗೆ , ಪೊಲೀಸ್ ವರಿಷ್ಠಾಧಿಕಾರಿಗಳಿಗೆ , ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸಹಾಯಕ ಕಮೀಷನರ್, ಪುತ್ತೂರುರವರಿಗೆ ಮನವಿ ನೀಡಿದ್ದಾರೆ.

ಸೌಜನ್ಯಳ ಪ್ರಕರಣವನ್ನು ಸರಕಾರವು ಉನ್ನತ ಮಟ್ಟದಲ್ಲಿ ತನಿಖೆ ಮಾಡುವಂತೆ ಸೌಜನ್ಯಳ ಕುಟುಂಬ, ಹಲವು ಸಂಘಟನೆಗಳು, ಬೆಳ್ತಂಗಡಿಯ ಸಾರ್ವಜನಿಕರು ಸರಕಾರವನ್ನು ಒತ್ತಾಯಿಸುತ್ತಿದ್ದರೂ, ಕರ್ನಾಟಕ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಮೌನವಹಿಸಿರುವುದು ಅತ್ಯಂತ ವಿಷಾದನೀಯವಾಗಿದ್ದು ಈ ಕೃತ್ಯವನ್ನು ಎಸಗಿರುವ ಆರೋಪಿ/ಆರೋಪಿಗಳನ್ನು ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗಲು ಆಸ್ಪದವನ್ನು ಕೊಡಬಾರದೆಂದು ಒತ್ತಾಯಿಸಿದ್ದಾರೆ.

error: Content is protected !!