ಕಾಂಗ್ರೆಸ್ ಸೋಲು-ಗೆಲುವಿನ ಪರಾಮರ್ಶೆ ಸಭೆಯಲ್ಲಿ ಸಮಿತಿಯ ಮುಖ್ಯಸ್ಥ ಬಿ.ಇಬ್ರಾಹಿಂ ನಿಂದನೆ.!: ಬೆಳ್ತಂಗಡಿ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಮತ್ತು ಗ್ರಾಮೀಣ ಘಟಕದಿಂದ ಖಂಡನೆ:ನೌಕರರ ಸಂಘದಲ್ಲಿ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ 2023ರ ಕುರಿತು ಜು.14ರಂದು ಕಾಂಗ್ರೆಸ್ ಸೋಲು-ಗೆಲುವಿನ ಕುರಿತು ಪರಾಮರ್ಶೆ ನಡೆಯುತ್ತಿದ್ದಾಗ ಪರಾಮರ್ಶೆ ಸಮಿತಿಯ ಮುಖ್ಯಸ್ಥರಾದ ಬಿ.ಇಬ್ರಾಹಿಂ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ತಂಡವನ್ನು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಮತ್ತು ಗ್ರಾಮೀಣ ಘಟಕ ಖಂಡಿಸಿದೆ.

ಈ ಕುರಿತು ಇಂದು (ಜು.21) ಬೆಳ್ತಂಗಡಿ ನೌಕರರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳ್ತಂಗಡಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 224 ಕ್ಷೇತ್ರಗಳಲ್ಲಿ 135 ಸ್ಥಾನಗಳನ್ನು ಪಡೆದು ಸರ್ಕಾರವನ್ನು ರಚಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪ ಹಿನ್ನಡೆಯನ್ನು ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲಾಗಿ 2 ವಿಧಾನಸಭಾ ಕ್ಷೇತ್ರದಲ್ಲಿ ವಿಜಯಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಆದ ಸೋಲು-ಗೆಲುವಿನ ಪರಾಮರ್ಶೆಯನ್ನು ನಡೆಸಲು ಕೆ.ಪಿ.ಸಿ.ಸಿಯ ಸೂಚನೆ ಮೇರೆಗೆ ಕೆ.ಪಿ.ಸಿ.ಸಿ ಸದಸ್ಯರು, ಡಿ.ಸಿ.ಸಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲು ಮತ್ತು ಪರಾಮರ್ಶೆಯನ್ನು ನಡೆಸಲು ಮಾಜಿ ರಾಜ್ಯಸಭಾ ಸದಸ್ಯರಾದ ಬಿ.ಇಬ್ರಾಹಿಂರವರ ನೇತೃತ್ವದ ಪುತ್ತೂರಿನ ಮಾಜಿ ಶಾಸಕಿಯಾದ ಶಕುಂತಲಾ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಮತಾಗಟ್ಟಿ, ಕಾಂಗ್ರೆಸ್ ಮುಖಂಡರಾದ ಬಂಟ್ವಾಳದ ಅಶ್ವಿನ್ ಕುಮಾರ್ ರೈ ಇವರನ್ನೊಳಗೊಂಡ ಸಮಿತಿ ಜು.14 ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಗಣ್ಯರನ್ನು ಸ್ವಾಗತಿಸಿದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್ ಅವರು ‘ಈ ಸಭೆಗೆ ನಾವು ಆಹ್ವಾನಿಸದ ಮುಖಂಡರುಗಳಲ್ಲದೆ ಕಾರ್ಯಕರ್ತರು ಕೂಡ ಆಗಮಿಸಿದ್ದು ಎಲ್ಲರಿಗೂ ಅವರವರ ಅಭಿಪ್ರಾಯವನ್ನು ತಿಳಿಸಲು ಅಥವಾ ಲಿಖಿತ ರೂಪದಲ್ಲಿ ಕೊಡಲು ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು. ಬಳಿಕ ಬಿ.ಇಬ್ರಾಹಿಂ ಅವರು ಮಾತನಾಡಲು ಎದ್ದು ನಿಂತ ಸಂದರ್ಭದಲ್ಲಿ ಧಿಡಿರನೇ ರಾಜೇಶ್ ಭಟ್ ಸವಣಾಲು, ಸಚಿನ್ ನೂಜೋಡಿ, ಪ್ರವೀಣ್ ಫೆರ್ನಾ‌ಂಡಿಸ್ ಉಜಿರೆ (ಹಳ್ಳಿಮನೆ), ಹಾಗೂ ಮತ್ತಷ್ಟು ಜನರ ಗುಂಪು ಕಾಂಗ್ರೆಸ್ ಕಚೇರಿಯೊಳಗೆ ನುಗ್ಗಿ ರಾಜ್ಯಸಭಾ ಸಚಿವರಾದ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಕೆ ವಸಂತ ಬಂಗೇರ, ಮಾಜಿ ಸಚಿವರಾದ ಕೆ ಗಂಗಾಧರ ಗೌಡರವರು ಬೇರೆ ಬೇರೆ ಕಾರಣಗಳಿಗೆ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಿಂತು ತೆಗೆದ ಫೋಟೋವನ್ನು ತೋರಿಸಿಕೊಂಡು ಬಂದು ಪರಾಮರ್ಶೆ ಸಮಿತಿಯ ಮುಖ್ಯಸ್ಥರಾದ ಬಿ.ಇಬ್ರಾಹಿಂರವರು ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಅವರನ್ನು ಹೊರಗೆ ಕಳುಹಿಸಿ ಎಂದು ಏಕವಚನದಲ್ಲಿ ಮಾತನಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಓರ್ವ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಅದರಲ್ಲೂ, ಅಲ್ಪಸಂಖ್ಯಾತ ಸಮುದಾಯದ ದೊಡ್ಡ ನಾಯಕನಿಗೆ ಅಗೌರವ ಮಾಡಿರುವುದನ್ನು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಮತ್ತು ಗ್ರಾಮೀಣ ಘಟಕವು ಖಂಡಿಸುತ್ತದೆ. ಆರೋಪಿತರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಪಕ್ಷದ ವರಿಷ್ಟರಿಗೆ ತಿಳಿಸಿರುತ್ತೇವೆ ಅವರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಗುರುವಾಯನಕೆರೆ, ಪ್ರಮುಖರಾದ ನಝೀರ್ ಬೆಳ್ತಂಗಡಿ, ಪ್ರಶಾಂತ್ ವೇಗಸ್ ಅಳದಂಗಡಿ, ಅಶ್ರಫ್ ನೆರಿಯ, ಖಾಲಿದ್, ಮಹಮ್ಮದ್ ರಫೀ, ಅಬ್ದುಲ್ ರಹೀಮನ್ ಪಡ್ಪು ಉಪಸ್ಥಿತರಿದ್ದರು.

error: Content is protected !!