ಉಜಿರೆ: ಕೆ.ಎಸ್.ಆರ್.ಟಿ.ಸಿ. ಬಸ್‌ನ ಹಿಂಭಾಗಕ್ಕೆ ದ್ವಿಚಕ್ರ ವಾಹನ ಡಿಕ್ಕಿ..!: ಸವಾರರಿಗೆ ಗಾಯ: ಆಸ್ಪತ್ರೆಗೆ ದಾಖಲಿಸಿದ ಬಸ್ ಚಾಲಕ-ನಿರ್ವಾಹಕರು

ಉಜಿರೆ: ದ್ವಿಚಕ್ರ ವಾಹನವೊಂದು ಕೆ.ಎಸ್.ಆರ್.ಟಿ.ಸಿ. ಬಸ್‌ನ ಹಿಂಭಾಗಕ್ಕೆ ಡಿಕ್ಕಿಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆ ಉಜಿರೆಯ ಸಿದ್ಧವನ ಬಸ್ ನಿಲ್ದಾಣದ ಬಳಿ ಜೂ.23ರಂದು ನಡೆದಿದೆ.

ಉಜಿರೆಯಿಂದ ಧರ್ಮಸ್ಥಳ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಧರ್ಮಸ್ಥಳ ನಿವಾಸಿ ಯಶೋಧರ ಮತ್ತು ಪೆರಿಯಡ್ಕ ನಿವಾಸಿ ವಿನಿತ್ ಎಂಬವರು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದ್ವಿಚಕ್ರವಾಹನ ಜಖಂಗೊಂಡಿದ್ದು, ಸವಾರರಿಬ್ಬರೂ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ, ನಿರ್ವಾಹಕರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಮಳೆಯಿಂದಾಗಿ ರಸ್ತೆ ಜಾರುವ ಸ್ಥಿತಿಯಲ್ಲಿದ್ದು, ದ್ವಿಚಕ್ರವಾಹನ ಸವಾರರು ಜಾಗರೂಕತೆಯಿಂದ ಚಲಿಸುವುದು ಉತ್ತಮ, ಜೊತೆಗೆ ಹೆಲ್ಮೆಟ್ ಧರಿಸುವುದು ಸುರಕ್ಷಿತ.

error: Content is protected !!