ಕೈ ಕೊಟ್ಟ ಮತಯಂತ್ರ, ವಿದ್ಯುತ್ ಬೆಳಕಿಲ್ಲದೆ ಪರದಾಡಿದ ಅಧಿಕಾರಿಗಳು : ಮತದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮತದಾರರ ವಾಗ್ವಾದ..!: ಚಾರ್ಮಾಡಿ ಮತಗಟ್ಟೆಯಲ್ಲಿ ಪೊಲೀಸರಿಂದ ಲಾಠಿಚಾರ್ಜ್..!

ಬೆಳ್ತಂಗಡಿ: ಚಾರ್ಮಾಡಿ ಮತಗಟ್ಟೆಯಲ್ಲಿ ಮೇ10 ರಂದು ಮತದಾನ ಮುಗಿದ ಬಳಿಕ ಪೊಲೀಸರಿಂದ ಲಾಠಿಚಾರ್ಜ್ ನಡೆದಿದೆ.

ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 21ನೇ ಮತಗಟ್ಟೆಯಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಮತಯಂತ್ರ ಕೈಕೊಟ್ಟಿತ್ತು. ಹೀಗಾಗಿ ಮತದಾರರು ಸುಮಾರು 3 ಗಂಟೆ ಕಾದು ಮತ ಚಲಾಯಿಸಿದರಿಂದ ಸಂಜೆ 6 ಗಂಟೆಯ ನಂತರವೂ ಮತದಾನ ಪ್ರಕ್ರಿಯೆ ಮುಂದುವರಿದಿತ್ತು. ಮತದಾನ ಮುಗಿದ ಬಳಿಕ ಸಿಬ್ಬಂದಿಗಳು ಮತಗಟ್ಟೆಯಲ್ಲಿ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬರೆಯಲು ಮುಂದಾದರು. ಈ ವೇಳೆ ವಿದ್ಯುತ್ ಕೈಕೊಟ್ಟಿದ್ದು, ಅಧಿಕಾರಿಗಳು ಮೊಬೈಲ್‌ನ ಬೆಳಕಿನಲ್ಲಿ ದಾಖಲೆ ಬರೆದಿದ್ದಾರೆ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಮತದಾನದಲ್ಲಿ ಅವ್ಯವಹಾರ ನಡೆಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ರಾತ್ರಿ 9.30ರ ಹೊತ್ತಿಗೆ ಡಿಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ವಾಹನ ಹೊರಡುತ್ತಿದ್ದಂತೆ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಸಾಕಷ್ಟು ಮನವಿ ಮಾಡಿದ್ರೂ ಜನ ಕೇಳದೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸ್ಥಳಕ್ಕೆ ಚುನಾವಣಾಧಿಕಾರಿ, ಹೆಚ್ಚುವರಿ ಪೊಲೀಸರನ್ನು ತರಿಸಲಾಗಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಅನಿವಾರ್ಯವಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಕಾರ್ಯಕರ್ತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!