ಪ್ರತಿಯೊಂದು ವಸ್ತುಗಳಲ್ಲೂ ದೇವರನ್ನು ಕಾಣುವ ಮನೋಭಾವ ನಮ್ಮದಾಗಲಿ: ಶ್ರದ್ಧಾಭಕ್ತಿಯ ಸೇವೆ ದೇವರಿಗೆ ಪ್ರಿಯ: ಕಟೀಲು ಆಸ್ರಣ್ಣ ದೇರಾಜೆಬೆಟ್ಟ ದೈವಸ್ಥಾನ: ಪುನರ್‌ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಸಂಪನ್ನ

 

 

 

 

ಬೆಳ್ತಂಗಡಿ: ದೈವ ದೇವರ ಸಾನ್ನಿಧ್ಯದ ಅಸ್ತಿತ್ವಕ್ಕೆ ಭಕ್ತರೇ ಪ್ರಾಧಾನ್ಯ. ನಮಗೆ ಅನುಗ್ರಹ ನೀಡುವ ವಸ್ತುಗಳೆಲ್ಲಾ ದೇವರಿಗೆ ಸಮಾನ. ಪ್ರತಿಯೊಂದು ವಸ್ತುಗಳಲ್ಲೂ ದೇವರನ್ನು ಕಾಣುವ ಮನೋಭಾವ ನಮ್ಮದಾಗಬೇಕು’ ಎಂದು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು ಅವರು ಮರೋಡಿ ಗ್ರಾಮದ ದೇರಾಜೆಬೆಟ್ಟ ದೈವ– ಕೊಡಮಣಿತ್ತಾಯ ದೇವಸ್ಥಾನದಲ್ಲಿ ಪುನರ್‌ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಮತ್ತು ನೇಮೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

 

 

ಸಮಾಜದಲ್ಲಿ ಧರ್ಮಸ್ಥಾಪನೆಗಾಗಿ, ಸತ್ಯದ ಉಳಿವಿಗಾಗಿ, ಜನರಲ್ಲಿ ಜಾಗೃತಾವಸ್ಥೆ ಮೂಡಿಸಲು ದೇವರು ಒಂದೊಂದು ರೂಪದಲ್ಲಿ ಅವತಾರವೆತ್ತಿದ್ದಾರೆ. ದೇವರನ್ನು ಶ್ರದ್ಧಾಭಕ್ತಿಯಿಂದ ಸೇವೆ ಮಾಡಿದರೆ ಅನುಗ್ರಹ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳತ ಮೊಕ್ತೇಸರ ಶಿವಪ್ರಸಾದ್ ಅಜಿಲರು ಮಾತನಾಡಿ, ದೇರಾಜೆಬೆಟ್ಟ ಕ್ಷೇತ್ರವು ಅಳದಂಗಡಿ ಅಜಿಲ ಸೀಮೆಯಲ್ಲೇ ವಿಶಿಷ್ಟ ಕ್ಷೇತ್ರವಾಗಿದೆ. ಹಿಂದೆ ಪೊಸರಡ್ಕದಲ್ಲಿ ಹಿಂದೆ ನೇಮೋತ್ಸವ ನಡೆದ ಸಂದರ್ಭದಲ್ಲಿ ನಾನು ಭಾಗಿಯಾಗಿದ್ದೆ. ಆ ಕ್ಷೇತ್ರ ಶೀಘ್ರದಲ್ಲಿ ಪುನರುತ್ಥಾನಗೊಂಡು, ನೇಮೋತ್ಸವ ನಡೆಯುವಂತಾಗಲಿ’ ಎಂದು ಹೇಳಿದರು.

 

ತುಳುನಾಡು ಪುಣ್ಯಭೂಮಿ: ರಕ್ಷಿತ್ ಶಿವರಾಂ

 

 

ಬೆಳ್ತಂಗಡಿ ಬೆಸ್ಟ್‌ ಫೌಂಡೇಷನ್‌ ಅಧ್ಯಕ್ಷ ರಕ್ಷಿತ್‌ ಶಿವರಾಂ ಮಾತನಾಡಿ, ‘ದೈವಗಳ ಬೀಡಾಗಿರುವ ತುಳುನಾಡು ಪುಣ್ಯಭೂಮಿಯಾಗಿದೆ. ಈ ಪುಣ್ಯ ಮಣ್ಣಿನಲ್ಲಿ ಸಾವಿರಕ್ಕೂ ಅಧಿಕ ದೈವ– ದೇವರನ್ನು ಆರಾಧಿಸಲಾಗುತ್ತದೆ. ಇಂತಹ ನೆಲದಲ್ಲಿ ಹುಟ್ಟಿದ ನಾವು ಧನ್ಯರು’ ಎಂದರು.

 

ಹೈಕೋರ್ಟ್‌ ವಕೀಲ ಪ್ರಜ್ವಲ್‌ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿ, ‘ಇತ್ತೀಚಿನ ದಿನಗಳಲ್ಲಿ ತುಳುನಾಡಿನ ಮಣ್ಣಿನಲ್ಲಿ ಧರ್ಮಜಾಗೃತಿ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ 10–15 ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 8 ಸಾವಿರ ಧಾರ್ಮಿಕ ಕ್ಷೇತ್ರಗಳು ಜೀರ್ಣೋದ್ಧಾರಗೊಂಡಿದೆ. ಧರ್ಮ ಜಾಗೃತಿಯಲ್ಲಿ ದೇಗುಲಗಳ ಕೊಡುಗೆ ದೊಡ್ಡದು ಎಂದರು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್‌ ಬೆಳ್ಳಿಬೀಡು ಅಧ್ಯಕ್ಷತೆ ವಹಿಸಿ, ಭಕ್ತರ ಸಹಕಾರದಿಂದ ಕೇವಲ 8 ತಿಂಗಳ ಅವಧಿಯಲ್ಲಿ ದೈವಸ್ಥಾನ ನಿರ್ಮಾಣವಾಗಿದೆ ಎಂದು ಹೇಳಿದರು.

 

 

 

ಆಡಳಿತ, ಜೀರ್ಣೋದ್ಧಾರ ಸಮಿತಿ ಸದಸ್ಯರು ವೇದಿಕೆಯಲ್ಲಿ ಇದ್ದರು. ದಾನಿಗಳಾದ ರಕ್ಷಿತ್‌ ಶಿವರಾಂ, ಸಂಜಯ್‌ ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತು. ಆಡಳಿತ–ಜೀರ್ಣೋದ್ಧಾರ ಸಮಿತಿ ಸದಸ್ಯ ಆದಿತ್ಯ ಪಿ.ಕೆ. ಸ್ವಾಗತಿಸಿದರು. ಮತ್ತೊಬ್ಬ ಸದಸ್ಯ ಜಯವರ್ಮ ಬುಣ್ಣು ವಂದಿಸಿದರು. ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ನೇಮೋತ್ಸವ: ಭಾನುವಾರ ಬೆಳಿಗ್ಗೆ ದೈವ ಹಾಗೂ ಕೊಡಮಣಿತ್ತಾಯ ದೈವಗಳ ಮಂಚ ಪ್ರತಿಷ್ಠಾಪನೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ, ಪರ್ವ ಸಂಕ್ರಾಂತಿ, ದರ್ಶನವು ಕೇಳ ಅನಂತ ಆಸ್ರಣ್ಣರ ನೇತೃತ್ವದಲ್ಲಿ ಪೌರೋಹಿತ್ಯದಲ್ಲಿ ನಡೆಯಿತು. ಸಂಜೆ ದೈವದ ಭಂಡಾರ ಉಚ್ಚೂರು ಮನೆಯಿಂದ, ಕೊಡಮಣಿತ್ತಾಯ ದೈವದ ಭಂಡಾರ ಪಾಂಡಿಬೆಟ್ಟು ಮನೆಯಿಂದ ಹೊರಟು ಸಕಲ ಬಿರುದಾವಳಿಗಳೊಂದಿಗೆ ದೇರಾಜೆಬೆಟ್ಟಕ್ಕೆ ತರಲಾಯಿತು. ರಾತ್ರಿ ದೈವ ಮತ್ತು ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯಿತು.

error: Content is protected !!