ವಿವಾದ ಹಿನ್ನೆಲೆ‌ ಶಾಲೆಗಳ ಮುಚ್ಚುವಂತಿಲ್ಲ, ನಾಳೆಯಿಂದಲೇ ಪ್ರೌಢಶಾಲೆ, ಕಾಲೇಜು ಆರಂಭಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ: ಮುಂದಿನ ಆದೇಶದವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಶಾಲಾ – ಕಾಲೇಜುಗಳಲ್ಲಿ ಬಳಸುವಂತಿಲ್ಲ: ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಹಿಜಬ್​- ಕೇಸರಿ ಶಾಲು ಧರಿಸುವಂತಿಲ್ಲ: ಹೈಕೋರ್ಟ್​‌ ಮಧ್ಯಂತರ ಆದೇಶ: ​ ವಿಸ್ತೃತ‌ ಪೀಠದಲ್ಲಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ.

 

ಬೆಂಗಳೂರು: ಹಿಜಬ್​-ಕೇಸರಿ ಶಾಲು ವಿವಾದದಿಂದಾಗಿ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳನ್ನು ನಾಳೆಯಿಂದಲೇ ಆರಂಭಿಸಬೇಕು. ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಹಿಜಬ್​- ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್​ ಸೂಚಿಸಿದೆ.
ಪ್ರಕರಣದ ಕುರಿತು ಶೀಘ್ರವೇ ತೀರ್ಪು ನೀಡಲಾಗುವುದು. ಅಲ್ಲಿವರೆಗೂ ರಾಜ್ಯದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ತಿ ಮಧ್ಯಂತರ ತೀರ್ಪು ನೀಡಿ ಆದೇಶಿಸಿದ್ದಾರೆ.
ಫೆ.‌14ರಂದು ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಶಾಲಾ – ಕಾಲೇಜುಗಳಲ್ಲಿ ಬಳಸುವಂತಿಲ್ಲ. ಕಾಲೇಜು ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದು ಹೈಕೋರ್ಟ್​ ತಿಳಿಸಿದೆ.
ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಪಡಿಸುವಂತಿಲ್ಲ. ಪ್ರಕರಣದ ಕುರಿತು ಅಂತಿಮ ತೀರ್ಪು ಬರುವವರೆಗೂ ಶಾಲಾ- ಕಾಲೇಜುಗಳು ನಿರಂತರವಾಗಿ ನಡೆಯಲಿ. ಯಾವುದೇ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಹಿಜಬ್​- ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್​ ಸೂಚಿಸಿದೆ.
ರಾಜ್ಯದಲ್ಲಿ ವಿವಾದವೆಬ್ಬಿಸಿರುವ ಹಿಜಬ್​ – ಕೇಸರಿ ಶಾಲು ಪ್ರಕರಣದಲ್ಲಿ ಸರ್ಕಾರದ ಪರ ಪ್ರಭುಲಿಂಗ ನಾವದಗಿ, ಸಂಜಯ್​ ಹೆಗಡೆ, ಶಾಲಾ ಸಮಿತಿ ಪರವಾಗಿ ಪೂವಯ್ಯ ಅವರು ವಾದ ಮಂಡಿಸಿದರೆ, ಅರ್ಜಿದಾರರ ಪರವಾಗಿ ದೇವದತ್ತ ಕಾಮತ್​, ಮೊಹಮದ್​ ತಾಹಿರ್​ ವಾದ ಮಂಡಿಸಿದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ನೇತೃತ್ವದ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್​ ದೀಕ್ಷಿತ್​ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಬ್​ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲಾಗುತ್ತಿದೆ.
ಫೆ.8, 9 ರಂದು ಎರಡು ದಿನಗಳ ಕಾಲ ಕೃಷ್ಣ ಎಸ್​.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಹಿಜಬ್​ ಕುರಿತ ಅರ್ಜಿಗಳ ವಿಚಾರಣೆ ನಡೆದ ಬಳಿಕ, ಪ್ರಕರಣ ಧರ್ಮ ಸೂಕ್ಷ್ಮವಾದ ಕಾರಣ ಇದನ್ನು ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಇದೀಗ ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಹಿಜಾಬ್​ ಕುರಿತ ಅರ್ಜಿಗಳ ವಿಚಾರಣೆ ನಡೆಯಿತು.
ಹಿಜಬ್​ ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ಸ್ಥಗಿತಗೊಳಿಸಬಾರದು ಎಂದು ಸರ್ಕಾರದ ವಿರುದ್ಧ ಸಿಜೆ ಬೇಸರ ವ್ಯಕ್ತಪಡಿಸಿ, ಇದಕ್ಕಾಗಿ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಬೇಗನೇ ಆರಂಭಿಸಿ. ಹಿಜಾಬ್​ ವಿವಾದದ ಕಾರಣಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ದೂರು ಇಡುವುದು ಸರಿಯಲ್ಲ ಎಂದು ಸಿಜೆ ರಿತುರಾಜ್​ ಅವಸ್ಥಿ ಹೇಳಿದರು. ಇದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಅರ್ಜಿದಾರರ ಪರ ವಕೀಲ ಕಾಮತ್​ ಸ್ಕಾರ್ಫ್​​ ಧಾರ್ಮಿಕ ಆಚರಣೆಯ ಭಾಗ ಅಲ್ಲ ಇದು ಮೂಲಭೂತ ಹಕ್ಕು ಎಂದು ವಾದ ಮಂಡನೆ ಮಾಡಿದರು. ಈ ಸಂಬಂಧ ಮಧ್ಯಂತರ ಆದೇಶಕ್ಕೂ ಒತ್ತಾಯಿಸಿದ್ದರು.‌

error: Content is protected !!