ಕೊರೊನಾ ನಿರ್ಮೂಲನೆಗೆ ಭಾರತೀಯ ಜೈನ ಸಂಘಟನೆಯ ಮಾನವೀಯ ಸೇವೆ ಸ್ತುತ್ಯಾರ್ಹ: ಮುಖ್ಯಮಂತ್ರಿ ಯಡಿಯೂರಪ್ಪ ಅಭಿಮತ:  ರಾಜ್ಯದ ಜನತೆಗಾಗಿ 61 ಕೇಂದ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳ ಲೋಕಾರ್ಪಣೆ:  ಹಳ್ಳಿಗಳಲ್ಲೂ ಆತಂಕಕಾರಿಯಾಗಿ‌ ಹರಡುತ್ತಿದೆ ಕೊರೋನಾ, ರೋಗ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗುವುದು ಅವಶ್ಯ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಅಹಿಂಸೆಯೇ ಜೈನ ಧರ್ಮದ ಶ್ರೇಷ್ಠ ತತ್ವವಾಗಿದ್ದು ಜೈನರ ಸಮಾಜ ಸೇವಾ ಕಳಕಳಿ ಶ್ಲಾಘನೀಯವಾಗಿದೆ. ಕೊರೊನಾ ನಿರ್ಮೂಲನೆಗೆ ಭಾರತೀಯ ಜೈನ ಸಂಘಟನೆಯ ಅಮೂಲ್ಯ ಮಾನವೀಯ ಸೇವೆ ಸ್ತುತ್ಯಾರ್ಹವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಬೆಂಗಳೂರಿನಲ್ಲಿ ಸೋಮವಾರ ಭಾರತೀಯ ಜೈನ ಸಂಘಟನೆ (ಬಿಜೆಎಸ್) ಆಶ್ರಯದಲ್ಲಿ ರಾಜ್ಯದ ಜನತೆಗಾಗಿ 61 ಕೇಂದ್ರಗಳಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಆಮ್ಲಜನಕ ಸಾಂದ್ರಕಗಳನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರಧಾನಿಯವರ ದಕ್ಷ ನೇತೃತ್ವದಲ್ಲಿ ಕೊರೊನಾ ನಿರ್ಮೂಲನೆಗೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಜನರು ಭಯಭೀತರಾಗಬಾರದು ಎಂದು ಆತ್ಮವಿಶ್ವಾಸ ತುಂಬಿದರು.

ಜನರು ಕೊರೊನಾದಿಂದ ಭಯಭೀತರಾಗದೆ, ಬೇಜವಾಬ್ದಾರಿಯಿಂದ ವರ್ತಿಸದೆ, ಅನಾರೋಗ್ಯ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ದೇಶದ ಜನತೆಗೆ ಸಂದೇಶ ನೀಡಿದ್ದಾರೆ. ಅವರ ಸಲಹೆಯನ್ನು ತಪ್ಪದೆ ಪಾಲಿಸಿ ಕೊರೊನಾ ಮುಕ್ತ ಸಮಾಜ ರೂಪುಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾರೈಸಿದರು.

ರಾಜ್ಯದ ಜನತೆಯ ಪರವಾಗಿ ಮುಖ್ಯಮಂತ್ರಿಯವರನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು.

ಧರ್ಮಾಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಾಂತಿಲಾಲ್ ಮುತ್ತಾರ ನೇತೃತ್ವದಲ್ಲಿ ಭಾರತೀಯ ಜೈನ ಸಂಘಟನೆಯ ಸೇವೆ ದೇಶಕ್ಕೆ ಮಾದರಿಯಾಗಿದೆ. ಪ್ರತಿ ರಾಜ್ಯದಲ್ಲಿಯೂ ಇಂತಹ ಸೇವಾ ಘಟಕಗಳಿರಬೇಕು. ದೇಶದಲ್ಲಿ ನೆರೆ-ಬರಗಾಲ ಸಂದರ್ಭದಲ್ಲೂ ಬಿಜೆಎಸ್‌ನ ಸೇವೆ ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿಯೂ ಕೊರೊನಾ ಮಾಯಾಸುರನಂತೆ ವೇಗವಾಗಿ ಹರಡುತ್ತಿರುವುದು ಆತಂಕಕಾರಿಯಾಗಿದೆ. ಆದರೆ, ಈಗ ಸರ್ಕಾರದ ಸೇವಾ ಕಾರ್ಯದಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ಕೊರೊನಾದಿಂದ ಜನರು ಭಯಭೀತರಾಗದೆ, ಮೂಢನಂಬಿಕೆಗೆ ಬಲಿಯಾಗದೆ, ರೋಗದ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ದೇಶದೆಲ್ಲೆಡೆ ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿ ಆದಷ್ಟು ಬೇಗ ಕೊರೊನಾ ಮುಕ್ತ ರಾಜ್ಯ ಹಾಗೂ ಕೊರೊನಾ ಮುಕ್ತ ದೇಶವಾಗಲಿ ಎಂದು ಹಾರೈಸಿದರು.

ರಾಜ್ಯದ ಪರವಾಗಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಮುಖ್ಯಮಂತ್ರಿ ಬಿ.ಎಸ್.ವೈ. ಗೌರವಿಸಿದರು.

ಬಿಜೆಎಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಜಿ ಲಂಕರ್ ಸ್ವಾಗತಿಸಿದರು. ಬಿಜೆಎಸ್‌ನ ಸ್ಥಾಪಕ ಶಾಂತಿಲಾಲ್ ಮುತ್ತ ಅವರು ಸಂಘಟನೆಯ ಸೇವಾ ಕಾರ್ಯಗಳ ಸಮಗ್ರ ಮಾಹಿತಿ ನೀಡಿದರು. ಭಾರತೀಯ ಜೈನ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮಹಾವೀರ ಚಂದ್ ಜಿ ಪರೆಕ್ ವಂದಿಸಿದರು. ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಬಿಜೆಎಸ್‌ನ ಓಂಪ್ರಕಾಶ್ ಲುನಾವತ್ ಮತ್ತು ಗೌತಮ್‌ಜಿ ಬಫ್ನಾ ಉಪಸ್ಥಿತರಿದ್ದರು.

error: Content is protected !!