ಸ್ಥಳೀಯ‌ ಮನೆಗಳಿಗೆ‌ ಕನ್ನ ಹಾಕಿದ್ರು, ಪೊಲೀಸರ ಕೈಗೆ ಸಿಕ್ಕಿಬಿದ್ರು: ಕರಾಯ ಪರಿಸರದಲ್ಲಿ ನಡೆದಿದ್ದ ಸರಣಿ ಕಳ್ಳತನ, ನಾಲ್ವರು ಆರೋಪಿಗಳ ಬಂಧನ: ಸುಮಾರು ₹ 5.5 ಲಕ್ಷ ಮೌಲ್ಯದ ಚಿನ್ನಾಭರಣ,₹ 1 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನ ವಶಕ್ಕೆ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನೆ ಪ್ರಮುಖ ಆರೋಪಿ

 

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರಾಯ ಪರಿಸರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ 4 ಮಂದಿ ಆರೋಪಿಗಳು, ಸುಮಾರು ರೂ. 5.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 1ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2021ರ ಜ. 14ರಂದು ಕರಾಯದ ಕಡಾಯ ನಿವಾಸಿ ಜೆ. ಎನ್. ಶರತ್ ಕುಮಾರ್,‌ ಮೇ 14ರಂದು ಸಂಬಂಧಿಕರ ಮನೆಗೆ ತೆರಳಿದ್ದ ಉರುವಾಲಿನ ಮುರಿಯಾಳ ನಿವಾಸಿ ಶಾಹೀದಾ ಎಂಬವರ ಮನೆಯಲ್ಲಿ‌ ಕಳ್ಳತನ ‌ನಡೆದು ನಗ, ನಗದು ಕಳ್ಳತನವಾಗಿತ್ತು. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಒಂದೇ ಪರಿಸರದಲ್ಲಿ ಈ ಎರಡು ಕಳ್ಳತನ ಪ್ರಕರಣ ದಾಖಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಪ್ರಕರಣವನ್ನು ಭೇದಿಸಲು ಪೊಲೀಸ್ ಅಧೀಕ್ಷಕ ಸೋನಾವಣಿ ರಿಷಿಕೇಶ್ ಆದೇಶದಂತೆ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ವಿಶೇಷ ಪತ್ತೆ ತಂಡ‌ ರಚಿಸಲಾಗಿತ್ತು.‌

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉರುವಾಲು, ಮುರಿಯಾಳ ನಿವಾಸಿ ಸಂಶುದ್ದೀನ್ ಪ್ರಾಯ(30), ಮೂಲತಃ ಹಿರೆಬಂಡಾಡಿ ಮುರ ನಿವಾಸಿಯಾಗಿದ್ದ ಸದ್ಯ ಕರಾಯದಲ್ಲಿ ನೆಲೆಸಿರುವ ನವಾಜ್ ಮಹಮ್ಮದ್(25), ಕರಾಯ, ಜನತಾ ಕ್ವಾಟ್ರಸ್ ನಿವಾಸಿ ಸೈಯದ್ ನಿಜಾಂ ತಂಗಳ್( 21), ಮೂಲತಃ ಇಳಂತಿಲ, ಕಡವಿನ ಬಾಗಿಲು ‌ನಿವಾಸಿ ಕರಾಯ ಬಳಿ ಬಾಡಿಗೆ ಮನೆ ನಿವಾಸಿ ಸಪ್ರರಾಜ್(24) ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ‌ ಪ್ರಕರಣದ ಪ್ರಮುಖ ಸಂಶುದ್ದೀನ್‌ ವಿರುದ್ಧ ಬೆಂಗಳೂರು ನಗರ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆದರೆ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತಿಳಿದುಬಂದಿದೆ.

ಪ್ರಕರಣಕ್ಕೆ ನಿಯೋಜನೆಗೊಂಡಿದ್ದ ವಿಶೇಷ ತಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭಾಸ್ಕರ ಒಕ್ಕಲಿಗ ಮತ್ತು ಪೊಲೀಸ್ ಉಪಾಧೀಕ್ಷಕ ಪುತ್ತೂರು ಉಪ ವಿಭಾಗದ ಗಾನ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ‌‌ ಕಾರ್ಯಾಚರಣೆ ನಡೆಸಿತ್ತು. ತಂಡದಲ್ಲಿ ಉಪ್ಪಿನಂಗಡಿ ಪಿ.ಎಸ್.ಐ. ಕುಮಾರ್ ಸಿ ಕಾಂಬ್ಳೆ, ಪ್ರೊಬೆಷನರಿ ಪಿಎಸ್‌ಐ ಅನೀಲಕುಮಾರ ಡಿ., ಎ.ಎಸ್.ಐ ಚೋಮ ಪಿ., ವೃತ್ತ ಕಛೇರಿ ಸಿಬ್ಬಂದಿ ಶಿವರಾಮ, ಸಲೀಂ, ಧರ್ಣಪ್ಪಗೌಡ, ಜಗದೀಶ ಎ., ಉಪ್ಪಿನಂಗಡಿ ಠಾಣೆಯ ಹರಿಶ್ಚಂದ್ರ, ಹರೀಶ್ ಗೌಡ, ಚಂದ್ರ, ನವೀನ, ಪ್ರತಾಪ್, ವಿನಾಯಕ, ಪುತ್ತೂರು ಗ್ರಾಮಾಂತರ ಠಾಣೆಯ ಪ್ರವೀಣ್ ರೈ, ಜಿಲ್ಲಾ ಗಣಕಯಂತ್ರ ಸಿಬ್ಬಂದಿ ಸಂಪತ್, ದಿವಾಕರ, ಚಾಲಕರಾದ ಬಿ. ನವಾಝ್ ಬುಡ್ಕಿ, ಕನಕರಾಜ್ ಇದ್ದರು.

error: Content is protected !!