ಸ್ವಾಗತ ಗೋಪುರ ನಿರ್ಮಾಣ ವೇಳೆ ವಿದ್ಯುತ್ ಶಾಕ್: ಯುವಕ ದಾರುಣ ಸಾವು: ಕಾಟಾಜೆ ಬ್ರಹ್ಮ ಕಲಶೋತ್ಸವ ಸ್ವಾಗತ ಗೋಪುರ ನಿರ್ಮಾಣದ ವೇಳೆ ಅವಘಡ

ಬೆಳ್ತಂಗಡಿ: ನೆರಿಯ ಗ್ರಾಮದ ಬಯಲು ಎಂಬಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುವ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ಎಂಬವರ ಪುತ್ರ ಉಮೇಶ( 38) ಘಟನೆಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ನೆರಿಯದ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ನೆರಿಯ ಬಯಲು ಎಂಬಲ್ಲಿ ಯುವಕರ ತಂಡವೊಂದು ಸ್ವಾಗತ ದ್ವಾರ ನಿರ್ಮಿಸುತ್ತಿದ್ದರು. ಅವರು ನಿರ್ಮಿಸುತ್ತಿದ್ದ ದ್ವಾರದ ಮೇಲ್ಗಡೆ ಹೆಚ್‌ಪಿಸಿಎಲ್ ನೆರಿಯ ಪಂಪ್ ಹೌಸ್‌ಗೆ ಹಾದು ಹೋದ ಹೈಟೆನ್ಶನ್ ವಿದ್ಯುತ್ ತಂತಿಗಳು ಇತ್ತು
ದ್ವಾರದ ಕೆಲಸ ಮಾಡುತ್ತಿರುವ ಸಂದರ್ಭ ಅಕಸ್ಮಾತ್ತಾಗಿ ದ್ವಾರಕ್ಕೆ ಅಳವಡಿಸಿದ ಬಿದಿರು ವಿದ್ಯುತ್ ತಂತಿಗಳಿಗೆ ತಾಗಿ ವಿದ್ಯುತ್ ಶಾಕ್ ಸಂಭವಿಸಿ ಉಮೇಶ್ ಗಂಭೀರಗಾಯಗೊಂಡಿದ್ದು, ತಕ್ಷಣ ಅವರನ್ನು‌ ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನೋರ್ವ ಪೆರ್ಲ ನಿವಾಸಿ ಗಂಗಾಧರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!