ಮಹಾರಾಷ್ಟ್ರ ಉಲ್ಬಣಗೊಂಡ ಕೊರೊನಾ, ಲಾಕ್ ಡೌನ್ ಎಚ್ಚರಿಕೆ ನೀಡಿದ ಸಿಎಂ ಉದ್ಧವ್ ಠಾಕ್ರೆ

ಮುಂಬೈ: ಕೊರೊನಾ ಸೋಂಕು ಈಗಾಗಲೇ ಮಹಾರಾಷ್ಟ್ರದಲ್ಲಿ ವಿಪರೀತವಾಗುತ್ತಿದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಜನರನ್ನು ಉದ್ಧೇಶಿಸಿ ಮಾತನಾಡಿದ ಅವರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಲಾಕ್​ಡೌನ್​ ಹೇರಿಕೆ ಬಗ್ಗೆ ಯೋಚಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಠಾಕ್ರೆ, ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದರು.

ರಾಜ್ಯದಲ್ಲಿ ಇಲ್ಲಿಯವರೆಗೆ 65 ಲಕ್ಷಕ್ಕಿಂತಲೂ ಅಧಿಕ ಜನರಿಗೆ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ.ಲಸಿಕೆ ನೀಡಿದ ಬಳಿಕ ಕೂಡ ಕೆಲವರು ಸೋಂಕಿಗೊಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಸರಿಯಾದ ರೀತಿಯಲ್ಲಿ ಮುಂಜಾಗರೂಕತೆ ಕ್ರಮ ವಹಿಸದೇ ಹಾಗೂ ಮಾಸ್ಕ್​ ಹಾಕಿಕೊಳ್ಳದೇ ಇರುವುದು ಎಂದಿದ್ದಾರೆ.ಮುಂದಿನ ದಿನಗಳಲ್ಲಿ ಪ್ರತಿದಿನ 2.5 ಲಕ್ಷ ಆರ್​​ಟಿ-ಪಿಸಿಆರ್​ ಟೆಸ್ಟ್​ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಗಳ ಸಂಖ್ಯೆ ಇದೇ ರೀತಿ ಹೆಚ್ಚಾಗುತ್ತಿದ್ದಂತೆ ಮುಂದಿನ 15-20 ದಿನಗಳಲ್ಲಿ ಆರೋಗ್ಯ ಮೂಲ ಸೌಕರ್ಯಗಳ ಕೊರತೆ ಉಂಟಾಗಬಹುದು ಎಂದು ಠಾಕ್ರೆ ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಮುಂದುವರೆದರೆ ಆರ್ಥಿಕತೆ ಅಥವಾ ಆರೋಗ್ಯ ನೋಡಬೇಕೇ ಎಂಬ ಪ್ರಶ್ನೆ ಉದ್ಭವವಾಗಲಿದ್ದು, ಲಾಕ್​ಡೌನ್​ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದರು. ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಪುಣೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ. ಅಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

error: Content is protected !!