
ಬೆಳ್ತಂಗಡಿ:ಅಶಕ್ತ ಕುಟುಂಬಗಳ ಬಾಳಿಗೆ ಬೆಳಕಾಗಿರುವ, ಸದಾ ಸಮಾಜಮುಖಿ ಚಿಂತನೆಗಳ ಮೂಲಕ ಬಡವರ ಪರ ಚಿಂತಿಸುವ ಕೊಡುಗೈದಾನಿ ಮುಂಬಯಿಯ ಪ್ರಸಿದ್ಧ ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿಯವರ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಕಡೆ ಕಾನೂನುಬಾಹಿರ ಹೇಳಿಕೆಗಳನ್ನು ಕೆಲವರು ನೀಡುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿರುವುದರ ವಿರುದ್ಧ ಇದೀಗ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸದಾ ಸಮಾಜದ ಪರ ಯೋಚನೆಗಳನ್ನು ಮಾಡುತ್ತಾ ತಾನು ಸಂಪಾದಿಸಿದ ಹಣದ ದೊಡ್ಡ ಪಾಲು ಸಮಾಜದ ಹಿತಕ್ಕಾಗಿ ಎಂಬ ಕಲ್ಪನೆಯನ್ನು ಇಟ್ಟುಕೊಂಡು ಕಳೆದ ಹಲವಾರು ವರ್ಷಗಳಿಂದ ಕೋಟಿಗಟ್ಟಲೇ ಹಣವನ್ನು ಸಂಘ, ಸಂಸ್ಥೆಗಳಿಗೆ, ಸಮಾಜಕ್ಕೆ ದಾನ ನೀಡುತ್ತ ಬಂದಿದ್ದಾರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕ ಸಹಕಾರ ನೀಡುತ್ತಿರುವ ಸದಾಶಿವ ಶೆಟ್ಟಿಯವರು ಕಲಾಪೋಷಕರಾಗಿಯೂ ಗುರುತಿಸಿಕೊಂಡಿದ್ದಾರೆ, ಕಲಾವಿದರ ಕಾಮಧೇನು ಯಕ್ಷಧ್ರುವ ಪಟ್ಲಪೌಂಡೇಶನ್ ಇದರ ಮಹಾಪೋಷಕರಾಗಿ ಅದರ ಮೂಲಕ ನಡೆಯುವ ಸಾಮಾಜಿಕ ಸೇವೆಯಲ್ಲಿಯೂ ಕೈಜೋಡಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅವರ ಸಮಾಜ ಮುಖಿ ಚಿಂತನೆಗಳನ್ನು ಸಹಿಸದ ಕೆಲವೊಂದು ವ್ಯಕ್ತಿಗಳು ಅವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಮನನೊಂದ ಅವರು ಮುಂದೆ ಯಾವುದೇ ರೀತಿಯಲ್ಲಿಯೂ ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆಯನ್ನು ನೋವಲ್ಲಿ ಹೇಳಿರುವುದು, ಅವರ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಭಾರೀ ಬೇಸರ ಉಂಟ್ಟು ಮಾಡಿದೆಯಲ್ಲದೇ ಅಪಪ್ರಚಾರಗೈಯುತ್ತಿರುವವರ ವಿರುದ್ದ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಅವರ ಅಭಿಮಾನಿಗಳು ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳು ಹರಿದಾಡುತಿದ್ದು , ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಅಭಿಪ್ರಾಯಗಳು ವ್ಯಕ್ತವಾಗುತಿರುವ ಮಾಹಿತಿಗಳೂ ಕೆಲವೆಡೆ ಕೇಳಿಬರುತಿದ್ದು, ಒಂದು ವೇಳೆ ಪರಿಹಾರವಾದರೆ ಪ್ರತಿಭಟನೆ ಮುಂದೂಡುವ ಸಾಧ್ಯತೆ ಇದೆ.ಅದಷ್ಟೂ ಬೇಗ ಗೊಂದಲಗಳು ಇತ್ಯರ್ಥಗೊಂಡು ಸಮಾಜಕ್ಕೆ ಮತ್ತಷ್ಟು ದಾನಿಗಳ ಕೊಡುಗೆ ಸಿಗುವಂತಾಗಲಿ ಎಂಬುವುದೇ ಎಲ್ಲರ ಆಶಯವಾಗಿದೆ.