
ಬೆಳ್ತಂಗಡಿ:ಅಶಕ್ತ ಕುಟುಂಬಗಳ ಬಾಳಿಗೆ ಬೆಳಕಾಗಿರುವ, ಸದಾ ಸಮಾಜಮುಖಿ ಚಿಂತನೆಗಳ ಮೂಲಕ ಬಡವರ ಪರ ಚಿಂತಿಸುವ ಕೊಡುಗೈದಾನಿ ಮುಂಬಯಿಯ ಪ್ರಸಿದ್ಧ ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿಯವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಕಾನೂನುಬಾಹಿರ ಹೇಳಿಕೆಗಳನ್ನು ಕೆಲವರು ನೀಡುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿರುವುದರ ವಿರುದ್ಧ ಇದೀಗ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸದಾ ಸಮಾಜದ ಪರ ಯೋಚನೆಗಳನ್ನು ಮಾಡುತ್ತಾ ತಾನು ಸಂಪಾದಿಸಿದ ಹಣದ ದೊಡ್ಡ ಪಾಲು ಸಮಾಜದ ಹಿತಕ್ಕಾಗಿ ಎಂಬ ಕಲ್ಪನೆಯನ್ನು ಇಟ್ಟುಕೊಂಡು ಕಳೆದ ಹಲವಾರು ವರ್ಷಗಳಿಂದ ಕೋಟಿಗಟ್ಟಲೇ ಹಣವನ್ನು ಸಂಘ, ಸಂಸ್ಥೆಗಳಿಗೆ, ಸಮಾಜಕ್ಕೆ ದಾನ ನೀಡುತ್ತ ಬಂದಿದ್ದಾರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕ ಸಹಕಾರ ನೀಡುತ್ತಿರುವ ಸದಾಶಿವ ಶೆಟ್ಟಿಯವರು ಕಲಾಪೋಷಕರಾಗಿಯೂ ಗುರುತಿಸಿಕೊಂಡಿದ್ದಾರೆ, ಕಲಾವಿದರ ಕಾಮಧೇನು ಯಕ್ಷಧ್ರುವ ಪಟ್ಲಪೌಂಡೇಶನ್ ಇದರ ಮಹಾಪೋಷಕರಾಗಿ ಅದರ ಮೂಲಕ ನಡೆಯುವ ಸಾಮಾಜಿಕ ಸೇವೆಯಲ್ಲಿಯೂ ಕೈಜೋಡಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅವರ ಸಮಾಜ ಮುಖಿ ಚಿಂತನೆಗಳನ್ನು ಸಹಿಸದ ಕೆಲವೊಂದು ವ್ಯಕ್ತಿಗಳು ಇವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ನೀಡುತ್ತಿರುವುದರಿಂದ ಮನನೊಂದ ಅವರು ಮುಂದೆ ಯಾವುದೇ ರೀತಿಯಲ್ಲಿಯೂ ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆಯನ್ನು ನೋವಲ್ಲಿ ಹೇಳಿರುವುದು, ಅವರ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಭಾರೀ ಬೇಸರ ಉಂಟ್ಟು ಮಾಡಿದೆಯಲ್ಲದೇ ಅಪಪ್ರಚಾರಗೈಯುತ್ತಿರುವವರ ವಿರುದ್ದ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಅವರ ಅಭಿಮಾನಿಗಳು ಆಯೋಜಿಸಲು ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳು ಹರಿದಾಡುತಿದ್ದು , ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.