ವಿದ್ಯಾರ್ಥಿನಿ‌ ಪುತ್ರಿಯ ಯೋಗಕ್ಷೇಮ ವಿಚಾರಿಸಲು ಬಂದಿದ್ದ ದಾವಣಗೆರೆಯ ತಂದೆ ಉಜಿರೆಯಲ್ಲಿ ಮೃತ್ಯು:  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥತೆ, ಆಸ್ಪತ್ರೆಗೆ ಕರೆದೊಯ್ದರೂ ಉಳಿಯಲಿಲ್ಲ ಜೀವ

ಬೆಳ್ತಂಗಡಿ: ಧರ್ಮಸ್ಥಳದಿಂದ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದಾವಣಗೆರೆಯ ವ್ಯಕ್ತಿ ಬಸ್ಸಿನಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಉಜಿರೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ನಿವಾಸಿ ಗಂಗಾಧರ ಸಂಗಪ್ಪ ಯರೇಶಿಮಿ(52) ಎಂದು ಗುರುತಿಸಲಾಗಿದೆ.

ಲಾಯಿಲ ಸಮೀಪದ ಖಾಸಗಿ ಕಾಲೇಜಿನಲ್ಲಿ ಬಿಎಎಂಎಸ್ ಅಧ್ಯಯನ ನಡೆಸುತ್ತಿದ್ದ ತನ್ನ ಪುತ್ರಿಯನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಲು ಆಗಮಿಸಿದ್ದರು. ಪುತ್ರಿಯನ್ನು ಭೇಟಿಯಾದ ಗಂಗಾಧರ ಸಂಗಪ್ಪ ಅವರು ಹೇಮ ಗಿರಿಯಪ್ಪ ಎಂಬವರೊಂದಿಗೆ ಧರ್ಮಸ್ಥಳದಿಂದ ಕೆ.ಎಸ್. ಆರ್. ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಉಜಿರೆ ಸಮೀಪ ಅಕಸ್ಮಿಕವಾಗಿ ಬಸ್ಸಿನಲ್ಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿದರೂ, ಅಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೃತರ ತಮ್ಮ ಬಸವರಾಜ ಯರೇಶೀಮಿ ದೂರು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!