
ಬೆಳ್ತಂಗಡಿ:ಕರಾವಳಿ ಜಿಲ್ಲೆಗಳ ಮುಸ್ಲಿಂ ಬಾಂಧವರು ಕಳೆದ ಒಂದು ತಿಂಗಳಿನಿಂದ ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಿದ್ದ ಪವಿತ್ರ ರಂಜಾನ್ ಉಪವಾಸ ವ್ರತಕ್ಕೆ ಗುರುವಾರ ತೆರೆ ಬಿದ್ದಿದ್ದು, ಶುಕ್ರವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ‘ಈದುಲ್ ಫಿತ್ರ್’ ಹಬ್ಬವನ್ನು ಆಚರಿಸಲಾಗುತ್ತದೆ.
ಇಂದು ಸಂಜೆ ಆಕಾಶದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ನಾಳೆ ಶುಕ್ರವಾರ ಈದ್ ಹಬ್ಬವನ್ನು ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಚಂದ್ರದರ್ಶನವಾಗುತ್ತಿದ್ದಂತೆಯೇ ಕರಾವಳಿಯಾದ್ಯಂತ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಮಸೀದಿಗಳಲ್ಲಿ ತಕ್ಬೀರ್ ಧ್ವನಿ ಮೊಳಗತೊಡಗಿದೆ.
ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ
ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಈದುಲ್ ಫಿತರ್ ಹಬ್ಬವು ಶುಕ್ರವಾರ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಆದೇಶಿಸಿದ್ದಾರೆ.