
ಬೆಳ್ತಂಗಡಿ: ಮಂಗಳೂರಿನ ಅಪಘಾತದ ಬೆನ್ನಲ್ಲೇ ತಾಲೂಕಿನಲ್ಲಿಯುಇ ಹೆದ್ದಾರಿಯಲ್ಲಿ ಮಹಾಗುಂಡಿಗಳನ್ನು ಮುಚ್ಚುವ ಹಾಗೂ ತೀರಾ ಹಾಳಾದ ಕಡೆಗಳಲ್ಲಿ ತೇಪೆ ಕೆಲಸ ಪ್ರಾರಂಭವಾಗಿದೆ.ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತಿದ್ದ, ಭಾರೀ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದೀಗ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚುವ ಹಾಗೂ ತೀರಾ ಹಾಳಾದ ಕಡೆಗಳಲ್ಲಿ ತೇಪೆ ಕೆಲಸ ಪ್ರಾರಂಭವಾಗಿದೆ.ರಾಷ್ಟೀಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ನಿತ್ಯ ಸಂಚಾರಿಸುತಿದ್ದು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡುತ್ತ ಸಂಚಾರಿಸುವ ಸ್ಥಿತಿ ನಿರ್ಮಾಣವಾಗಿತ್ತು.ಹೊಂಡಗಳಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಗಿತ್ತು.ಅದೆಷ್ಟೋ ಅಪಘಾತಗಳು, ವಾಹನ ಮಗುಚಿ ಬಿದ್ದು ಗಂಭೀರ ಗಾಯಗಳಾಗಿರುವ ಹಲವಾರು ಪ್ರಕರಣ ದಿನಂಪ್ರತಿ ನಡೆಯುತಿತ್ತು. ಭಾರೀ ಮಳೆಯ ಕಾರಣದಿಂದಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂಬ ಉತ್ತರವೂ ಅಧಿಕಾರಿಗಳಿಂದ ಕೇಳಿ ಬರುತಿತ್ತು. ಇದೀಗ ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.ಅದರೆ ಇಂದು ಮಂಗಳೂರು ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ 66 ಕೂಳೂರು ಮೇಲ್ಸೆತುವೆ ಬಳಿ ಹೆದ್ದಾರಿಯಲ್ಲಿದ್ದ ದೊಡ್ಡ ಹೊಂಡಕ್ಕೆ ಮಹಿಳೆ ಚಲಾಯಿಸುತಿದ್ದ ದ್ವಿಚಕ್ರ ವಾಹನ ಬಿದ್ದು ಮಗುಚಿಬಿದ್ದಾಗ ಸವಾರೆಯ ಮೇಲೆ ಮೀನಿನ ಲಾರಿಯೊಂದು ಹರಿದು ಮೃತಪಟ್ಟಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಸ್ತೆಗಳಲ್ಲಿಯ ಹೊಂಡ ಮುಚ್ಚುವ ಹಾಗೂ ತೇಪೆ ಕೆಲಸ ತ್ವರಿತಗತಿಯಲ್ಲಿ ಪ್ರಾರಂಭಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.ಏನಿದ್ದರೂ ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋಗಿದ್ದ ಜನತೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.