ಬೆಳ್ತಂಗಡಿ:ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ ಘಟನೆ ಶಿರ್ಲಾಲಿನಲ್ಲಿ ಜು22 ರಂದು ನಡೆದಿದೆ.
ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸ್ಪಂದನ ಸಭೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಸ್ಥಳೀಯರೊಬ್ಬರು ಕಳೆದ 3 ತಿಂಗಳ ಹಿಂದೆ ಗುರುಮಜಲು ಕೈತ್ಯರಡ್ಡ ಕಾಂಕ್ರೀಟ್ ರಸ್ತೆ ಕಳಪೆ ಗುಣಮಟ್ಟದಲ್ಲಿ ಮಾಡಲಾಗಿದ್ದು, ಮಾಡಿದ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟಿದೆ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದರು. ಈ ರೀತಿ ಅಧಿಕಾರಿಗಳು ಮೌನ ವಹಿಸಿದರೆ ಕಳಪೆ ಕಾಮಗಾರಿಯನ್ನು ತಡೆಯುವವರು ಯಾರು ಎಂದು ಅಸಾಮಾಧಾನ ಹೊರಹಾಕಿದ ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಯಾರು ಎಂದು ಶಾಸಕ ಹರೀಶ್ ಪೂಂಜ ಕೇಳಿದಾಗ ನಾಗೇಶ್ ಕುಮಾರ್ ಎಂದು ಸ್ಥಳೀಯರು ತಿಳಿಸಿದರು. ಈಗಾಗಲೇ ₹1 ಕೋಟಿಯಲ್ಲಿ 60 ಲಕ್ಷ ಗುತ್ತಿಗೆದಾರರಿಗೆ ಪಾವತಿಯಾಗಿದೆ. ಇನ್ನು 40 ಲಕ್ಷ ನೀಡಲು ಬಾಕಿ ಇದೆ ಎಂಬ ಮಾಹಿತಿಯನ್ನು ಶಾಸಕರಿಗೆ
ಈ ವೇಳೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಬಕ್ಕಪ್ಪ ಅವರು ತಿಳಿಸಿದಾಗ ಕಳಪೆ ಕಾಮಗಾರಿ ನಡೆದಿದ್ರೆ ಏನು ಮಾಡ್ತೀರಿ ಎಂದು ಪ್ರಶ್ನಿಸಿದ ಶಾಸಕರು ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವವರೆಗೆ ಪೇಮೆಂಟ್ ತಡೆ ಹಿಡಿಯಿರಿ ಎಂದರು.ನದಿಗೆ ಮಣ್ಣು ಹಾಕಿ ಒತ್ತುವರಿ ಮಾಡಿ ಕೃಷಿ ಮಾಡಲಾಗಿದೆ ಸಾರ್ವಜನಿಕರು ತಿಳಿಸಿದಾಗ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.
ಹಳೇ ವಿದ್ಯುತ್ ತಂತಿ ತುಂಡಾಗಿ ಬೀಳುವುದರಿಂದ ಕೃಷಿಕರಿಗೆ ಸಮಸ್ಯೆಯಾಗುತ್ತಿದೆ, ವೋಲ್ಟೇಜ್ ಸಮಸ್ಯೆಯನ್ನೂ ಸರಿ ಪಡಿಸಬೇಕು , ಕಾಡು ಪ್ರಾಣಿಗಳ ಹಾವಳಿ, ಜಲಜೀವನ್ ಮೆಷಿನ್ ಕಾಮಗಾರಿ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಕೊನೆಯಲ್ಲಿ ವಿವಿಧ ದೂರುಗಳನ್ನು ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ನೀಡಿದರು.ಸಭೆಯಲ್ಲಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.