ಬೆಳ್ತಂಗಡಿ : ಸಂಶಯಾಸ್ಪದ ರೀತಿಯಲ್ಲಿ ಯುವತಿಯೊಬ್ಬಳ ಶವ ಮನೆ ಬಳಿಯ ಕೆರೆಯಲ್ಲಿ ಪತ್ತೆಯಾಗಿದ್ದು. ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕುಕ್ಕೊಟ್ಟು ನಿವಾಸಿ ನಾಗೇಶ್- ಭಾರತಿ ದಂಪತಿಗಳ ದ್ವಿತೀಯ ಪುತ್ರಿ ವೀಣಾ(19) ಎಂಬಾಕೆಯ ಶವ ಮನೆ ಸಮೀಪದ ತೋಟದ ಬಳಿಯ ಕೆರೆಯಲ್ಲಿ ಜುಲೈ 11 ರಂದು ಸಂಜೆ ಪತ್ತೆಯಾಗಿದೆ.
ನಾಗೇಶ್ ದಂಪತಿಗಳಿಗೆ ನಾಲ್ಕು ಜನ ಮಕ್ಕಳಲ್ಲಿ ವೀಣಾ ಎರಡನೇಯವಳಾಗಿದ್ದು ಅಕೆ ಮಾನಸಿಕವಾಗಿ ಅನಾರೋಗ್ಯಕ್ಕೊಳಗಾದ ಕಾರಣ ಪುತ್ತೂರಿನ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ವೀಣಾಗೆ ಒಂದುವರೆ ತಿಂಗಳ ಮಗು ಇದ್ದು ಅವಳ ಅನಾರೋಗ್ಯದ ಕಾರಣದಿಂದ ಮಗುವನ್ನು ಸುಬ್ರಹ್ಮಣ್ಯ ಸಂಬಂಧಿಗಳ ಮನೆಯಲ್ಲಿ ಬಿಟ್ಟಿರುವುದಾಗಿ ಮೃತಳ ತಂದೆ ತಿಳಿಸಿದರಲ್ಲದೇ, ಪುತ್ತೂರಿಗೆ ಮದ್ದಿಗಾಗಿ ಹೋಗಿದ್ದ ವೇಳೆ ಮನೆಯಲ್ಲಿದ್ದ ವೀಣಾ ಕಾಣೆಯಾಗಿರುವ ಬಗ್ಗೆ ಮನೆಯವರು ತಿಳಿಸಿದ್ದು , ಅವರು ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದಾಗ ಅವರು ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ, ಈ ವೇಳೆ ಮತ್ತೆ ಹುಡುಕಾಟ ನಡೆಸಿದಾಗ ಮನೆ ಬಳಿಯ ಕೆರೆಯಲ್ಲಿ ಬಿದ್ದಿರುವ ಬಗ್ಗೆ ಮನೆಯವರು ತಿಳಿಸಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿ ಬಳಿಕ ರಾತ್ರಿ ಅಗ್ನಿಶಾಮಕ ಮತ್ತು ಶೌರ್ಯ ವಿಪತ್ತು ತಂಡದವರು ಸೇರಿ ಮೃತದೇಹ ಹೊರತೆಗೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾವಿನ ಬಗ್ಗೆ ಸಾರ್ವಜನಿಕವಾಗಿ ಹಾಗೂ ಸಂಬಂಧಿಕರಿಗೆ ಹಲವು ಅನುಮಾನಗಳಿದ್ದು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಫ್ಎಸ್ಎಲ್ ವಿಭಾಗದ ಸೋಕೋ ಸಿಬ್ಬಂದಿ ಅರ್ಪಿತಾ ,ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಪೊಲೀಸರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೀಣಾ ಮೃತದೇಹವನ್ನು ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಸಾಗಿಸಲಾಗಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.