ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ: ರೈಲ್ವೇ ಸಿಬ್ಬಂದಿಯನ್ನು ಹೊಡೆದು ಕೊಂದ ಪ್ರಯಾಣಿಕರು..!

ಸಾಂದರ್ಭಿಕ ಚಿತ್ರ

ಬಿಹಾರ: ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರೈಲಿನ ಸಿಬ್ಬಂದಿಯನ್ನು ಪ್ರಯಾಣಿಕರು ಹಾಗೂ ಬಾಲಕಿಯ ಕುಟುಂಬಸ್ಥರು ಹೊಡೆದು ಕೊಂದ ಘಟನೆ ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್ ಪ್ರೆಸ್  ನಲ್ಲಿ ನಡೆದಿದೆ.

ರಾತ್ರಿ ಬಾಲಕಿಯ ತಾಯಿ ವಾಶ್ ರೂಂಗೆ ಹೋದ ವೇಳೆ ರೈಲಿನ ಸಿಬ್ಬಂದಿ ಪ್ರಶಾಂತ್ ಕುಮಾರ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆತನ ಕಿರುಕುಳದಿಂದ ಹೆದರಿದ ಬಾಲಕಿ ಕೂಡಲೇ ಕುಟುಂಬಸ್ಥರಿಗೆ ದೂರು ನೀಡಿದ್ದಾಳೆ. ಇದರಿಂದ ಕುಪಿತಗೊಂಡ ಬಾಲಕಿಯ ಕುಟುಂಬಸ್ಥರು ಹಾಗೂ ಇತರೆ ಪ್ರಯಾಣಿಕರು ಕೆಲಗಂಟೆಗಳ ಕಾಲ ಮನಬಂದಂತೆ ವ್ಯಕ್ತಿಗೆ ಥಳಿಸಿದ್ದಾರೆ.

ಮರುದಿನ ರೈಲು ಉತ್ತರ ಪ್ರದೇಶದ ಕಾನ್ಪುರ ಕೇಂದ್ರ ನಿಲ್ದಾಣವನ್ನು ತಲುಪಿದ್ದು, ಪ್ರಯಾಣಿಕರು ಸರ್ಕಾರಿ ರೈಲ್ವೆ ಪೊಲೀಸರಿಗೆ ಪ್ರಶಾಂತ್ ಕುಮಾರ್ ನನ್ನು ಒಪ್ಪಿಸಿ, ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

error: Content is protected !!