ಹೊಸ ಕಾನೂನುಗಳ ಅಡಿಯಲ್ಲಿ ಸರಿಯಾಗಿ ಪ್ರಕರಣ ದಾಖಲಿಸಿ: ತಪ್ಪು ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು: ಪೊಲೀಸರಿಗೆ ನಗರ ಪೊಲೀಸ್ ಆಯುಕ್ತರಿಂದ ಸೂಚನೆ

ಬೆಂಗಳೂರು: ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಕಾನೂನುಗಳ ಅಡಿಯಲ್ಲಿ ಸರಿಯಾಗಿ ಪ್ರಕರಣ ದಾಖಲಿಸಿ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮೌಖಿಕ ಸೂಚನೆ ನೀಡಿದ್ದಾರೆ.

ಜುಲೈ 1ರಿಂದ ದೇಶದಲ್ಲಿ ಮೂರು ಹೊಸ ಕಾನೂನುಗಳು ಅನುಷ್ಠಾನಗೊಂಡಿವೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್) ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಕಾನೂನು ಆಗಿರುವುದರಿಂದ ಸೂಕ್ತ ತರಬೇತಿ ಪಡೆದರೂ ಪೊಲೀಸರಲ್ಲಿ ಗೊಂದಲವಿದೆ. ಹೀಗಾಗಿ ಸರಿಯಾಗಿ ತಿಳಿದುಕೊಂಡು ಸೆಕ್ಷನ್ ಹಾಕಬೇಕು ಎಂದಿದ್ದಾರೆ.

ಆರೋಪಿಗಳ ಮೇಲೆ ಬರುವುದು ಆರೋಪಗಳಷ್ಟೇ. ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸೆಕ್ಷನ್‌ಗಳನ್ನು ನಮೂದಿಸಿ. ಉದ್ದೇಶಪೂರ್ವಕವಲ್ಲದಿದ್ದರೂ ತಪ್ಪಾಗಿ ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು. ಆರೋಪಿ ಅಪರಾಧ ಮಾಡದಿದ್ದಲ್ಲಿ ಆ ಸೆಕ್ಷನ್‌ಗಳನ್ನು ಬಳಸಿದರೆ ತೊಂದರೆಗಳಾಗಬಹುದು. ಐಪಿಸಿ ಹಾಗೂ ಸಿಆರ್‌ಪಿಸಿ ಕಾಯ್ದೆಗೆ ಪರ್ಯಾಯವಾಗಿ ಬಿಎನ್‌ಎಸ್, ಬಿಎನ್‌ಎಸ್‌ಎಸ್ ಕಾಯ್ದೆಗಳು ಜಾರಿಯಾಗಿವೆ. ಇದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಿಬ್ಬಂದಿಗೆ ಗೊಂದಲವಾಗದAತೆ ಪ್ರತ್ಯೇಕ ಪೊಲೀಸ್ ಆ್ಯಪ್ ರಚಿಸಲಾಗಿದೆ. ಹೀಗಿದ್ದರೂ ಕೆಲವು ಸಂದರ್ಭಗಳಲ್ಲಿ ಗೊಂದಲ ಉಂಟಾದರೆ ನುರಿತ ವಕೀಲರು ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಬಳಿ ಕೇಳಿ ಸೆಕ್ಷನ್‌ಗಳ ಬಗ್ಗೆ ತಿಳಿದುಕೊಂಡು ಪ್ರಕರಣ ದಾಖಲಿಸಬೇಕು.

ತರಬೇತಿ ಪಡೆದರೂ ಕೂಡ ಕೆಲವು ಸಂದರ್ಭಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಹೀಗಾಗಿ ತಜ್ಞರೊಂದಿಗೆ ಕೇಳಿ ತಿಳಿದುಕೊಂಡು ಹೊಸ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು. ಜನರಿಗೆ ನ್ಯಾಯ ಸಿಗುವ ಉದ್ದೇಶದಿಂದ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿ ಎಂದಿದ್ದಾರೆ.

error: Content is protected !!