ಕಾಲೇಜು ವಿದ್ಯಾರ್ಥಿಗಳ ದುರಂತ ಅಂತ್ಯ, ಈಜಲು ತೆರಳಿದ್ದ ಐವರು ಮಸಣಕ್ಕೆ:ಪದೇ ಪದೇ ಸಂಭವಿಸುತ್ತಿವೆ ದುರ್ಘಟನೆಗಳು: ಮಕ್ಕಳೇ ನೀರಿಗಿಳಿಯುವ ಮುನ್ನ ಎಚ್ಚರ…!!!

 


ಬೆಂಗಳೂರು: ಮೇಕೆದಾಟು ನೋಡಲು ಬಂದಿದ್ದ ಐವರು ಕಾಲೇಜು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ ಈಜಲು ನದಿಗೆ ಇಳಿದಿದ್ದಾನೆ. ಈ ವೇಳೆ ಆತ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಸ್ನೇಹಿತರು ರಕ್ಷಣೆಗೆ ತೆರಳಿದ್ದಾಗ ಒಬ್ಬರ ಹಿಂದೆ ಒಬ್ಬರು ನೀರಿಗೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಮೃತರನ್ನು ವರ್ಷ (20), ಕೆಎಲ್ಇ ಕಾಲೇಜು ರಾಜಾಜಿನಗರ 2ನೇ ಹಂತ, ಅಭಿಷೇಕ್ (20) ಬಿಹಾರ ಮೂಲದವರಾಗಿದ್ದು ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, ಹರ್ಪಿತ ಎನ್.ಎಲ್ (20) ಎಂಜಿನಿಯರಿಂಗ್ 2ನೇ ವರ್ಷ ಚಿಕ್ಕಬಾಣಾವರ ಆರ್.ಆರ್ ಕಾಲೇಜು (ಮಂಡ್ಯ ಮೂಲ), ತೇಜಸ್ (21) ಬಿಸಿಎ 2ನೇ ವರ್ಷ ವಿಜಯನಗರ ಸರ್ಕಾರಿ ಕಾಲೇಜ್​ (ಚಿತ್ರದುರ್ಗ ಮೂಲ), ನೇಹಾ (19) ಕೆಮಿಸ್ಟ್ರಿ ಕೆಎಲ್ಇ ಕಾಲೇಜು ಆರ್.ಆರ್ ನಗರ (ಚಿತ್ರದುರ್ಗ ಮೂಲ) ಎಂದು ಗುರುತಿಸಲಾಗಿದೆ.

ಮೇಕೆದಾಟು ನೋಡಲು ಬೆಂಗಳೂರಿನಿಂದ 12 ಕಾಲೇಜು ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ಕಾಲೇಜು ವಿದ್ಯಾರ್ಥಿಯೊಬ್ಬ ಈಜಾಡಲು ನದಿಗಿಳಿದಿದ್ದಾನೆ. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಸಹಪಾಠಿಗಳು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದ್ರೆ ಒಬ್ಬರಂತೆ ಒಬ್ಬರು ಕಾಪಾಡಲು ತೆರಳಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಕನಕಪುರ ಬಳಿಯ ಮೇಕೆದಾಟು ಸಂಗಮದಲ್ಲಿ ಜರುಗಿದೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನೀರುಪಾಲಾದ ಐವರು ವಿದ್ಯಾರ್ಥಿಗಳು ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಐವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ದಯಾನಂದ ವಿದ್ಯಾಸಾಗರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!