ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ: ಹಿಂದುತ್ವದ ಭದ್ರ ಕೋಟೆಯಲ್ಲಿ ಬಿಜೆಪಿಗೆ ಜಯ, ಚೌಟ ವಿಶ್ವಾಸ: ಕೇಸರಿ ಧ್ವಜದೊಂದಿಗೆ ಗಮನ ಸೆಳೆದ ಜೆಡಿಎಸ್ ಹಾಗೂ ತುಳುಧ್ವಜ

ಬೆಳ್ತಂಗಡಿ: ಲೋಕಸಭಾ ಚುನಾವಣೆ 2024ಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಏ.04ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಿದರು.

ಮಂಗಳೂರಿನ ಬಂಟ್ಸ್ ಹಾಸ್ಟೆಲ್‍ನ ಬಿಜೆಪಿ ಚುನಾವಣಾ ಕಚೇರಿಯಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ಚುನಾವಣಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಮೆರವಣಿಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್‍ನಿಂದ ಅಂಬೇಡ್ಕರ್ ವೃತ್ತವಾಗಿ ಮಿಲಾಗ್ರಿಸ್, ಕ್ಲಾಕ್ ಟವರ್‍ಗೆ ಬಂದು ಟೌನ್ ಹಾಲ್ ಒಳಗಡೆ ಆಗಮಿಸಿತು. ಅಲ್ಲಿಂದ ಟೌನ್ ಹಾಲ್‍ನ ಆವರಣದೊಳಗೆ ಬಹಿರಂಗ ಸಭೆ ನಡೆಯಿತು. ನಂತರ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ನಾಮಪತ್ರ ಸಲ್ಲಿಕೆಗೆ ತೆರಳುವಾಗ ಬೃಜೇಶ್ ಚೌಟ ಅವರು ತುಳುನಾಡ ಶಾಲು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಕೇಸರಿ ಧ್ವಜದೊಂದಿಗೆ ಜೆಡಿಎಸ್ ಧ್ವಜ, ತುಳು ಬಾವುಟಗಳು ರಾರಾಜಿಸುತ್ತಿತ್ತು.
ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ, “ಕಾರ್ಯಕರ್ತರ ಹುರುಪು ಮತ್ತು ಕ್ಷೇತ್ರದ ಜನರ ಉತ್ಸಾಹ ಹೆಚ್ಚಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಅಪಾರ ವಿಶ್ವಾಸ ತೋರುತ್ತಿದ್ದಾರೆ. ಮತ್ತೊಮ್ಮೆ ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿ ಜಯಗಳಿಸಲಿದೆ” ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಬಿಜೆಪಿಯ ಪರ ಜನರ ಒಲವಿದೆ. ನಮ್ಮ ಹಿಂದಿನ ದಾಖಲೆಗಳನ್ನು ಮೀರಿ ಬೃಜೇಶ್ ಚೌಟ ಗೆಲುವು ಸಾಧಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!