ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ : ಧರ್ಮಸ್ಥಳ ಪೊಲೀಸರಿಗೆ ದೂರು: ಬುದ್ದಿ ಮಾತಲ್ಲೇ ಸಂಸಾರ ಬೆಳಗಿದ ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಮತ್ತು ತಂಡ

ಬೆಳ್ತಂಗಡಿ : ನೆರಿಯ ಗ್ರಾಮದ ಬಾಂಜಾರುಮನೆ ಎಂಬಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ ಸುಶೀಲ (46) ಎಂಬಕೆ ಕಳೆದ ಎರಡು ವರ್ಷದ ಹಿಂದೆ ಹಾಸನ ಜಿಲ್ಲೆಯ ಅರಕಲುಗೂಡು ನಿವಾಸಿ ರಂಗಣ್ಣ (48) ಎಂಬಾತನ ಜೊತೆ ವಿವಾಹವಾಗಿದ್ದರು. ಇವರಿಗೆ ಸುಮಾರು 5 ಎಕರೆ ಜಾಗ ಇದೆ. ಇದರಲ್ಲಿ 2.50 ಎಕರೆಯಷ್ಟು ಕೃಷಿ ಇದ್ದು, ಗಂಡ ರಂಗಣ್ಣ ಹಾಗೂ ಪತ್ನಿ ಮನೆಯಲ್ಲಿದ್ದುಕೊಂಡೇ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮದುವೆಯಾಗಿ ಒಂದು ತಿಂಗಳು ಚೆನ್ನಾಗಿ ಜೀವನ ನಡೆಸುತ್ತಿದ್ದ ಇವರು ನಂತರದ ದಿನಗಳಲ್ಲಿ ರಂಗಣ್ಣ ಪತ್ನಿಗೆ ಪ್ರತಿನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ. ಗಂಡನ ಕಿರುಕುಳವನ್ನು ಎರಡು ವರ್ಷದಿಂದ ಸಹಿಸಿಕೊಂಡು ಬಂದಿದ್ದ ಸುಶೀಲ ಕಳೆದ ಕೆಲ ದಿನಗಳಿಂದ ಕಿರುಕುಳ ತಾಳಲಾರದೆ ನೇರವಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡು ಗಂಡನನ್ನು ಸರಿಪಡಿಸುವಂತೆ ಪೊಲೀಸರ ಮುಂದೆ ಕೇಳಿಕೊಂಡಿದ್ದರು. ಜೊತೆಗೆ ಜೂನ್ 9 ರಂದು ಗಂಡ ಪ್ರತಿನಿತ್ಯ ವಿನಾಃ ಕಾರಣ ಕಿರುಕುಳ ನೀಡುತ್ತಿದ್ದಾನೆ, ಆತನನ್ನು ಠಾಣೆಗೆ ಕರೆಸಿ ಸೂಕ್ತ ತಿಳುವಳಿಕೆ ನೀಡಿಬೇಕೆಂದು ಕೋರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ಅರ್ಜಿ ನೀಡಿದ್ದರು.

ಸುಶೀಲ ದೂರು ನೀಡುವ ಸಂದರ್ಭದಲ್ಲಿ ಸಬ್  ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರು ರಜೆಯಲ್ಲಿದ್ದರು. ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾದ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಠಾಣೆಗೆ ಬಂದ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಗ ಬಾಂಜಾರುಮಲೆ ನಿವಾಸಿ ಸುಶೀಲ ಪ್ರಕರಣದ ಬಗ್ಗೆ ಗಮನಹರಿಸಿ, ಬಾಂಜಾರುಮಲೆಗೆ ಹೋಗಲು ಸಮಯ ನಿಗದಿ ಮಾಡಿದ್ರು. ಅದರಂತೆ ಜೂನ್ 14 ಕ್ಕೆ ಸಬ್ ಇನ್ಸ್ ಪೆಕ್ಟರ ಅನಿಲ್ ಕುಮಾರ್. ಡಿ ಮತ್ತು ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಸತೀಶ್ ನಾಯ್ಕ್ ಚಾಲಕ ಲೋಕೇಶ್ ಇಲಾಖಾ ಜೀಪಿನಲ್ಲಿ ಬಾಂಜಾರುಮಲೆಗೆ ಬೆಳಗ್ಗೆ ಹೋಗಿ, ದಂಪತಿಗಳನ್ನು ಕೂರಿಸಿ ಸಮಸ್ಯೆಗಳನ್ನು ವಿಚಾರಿಸಿದ್ದಾರೆ. ಆಗ ಗಂಡನ ಕುಡಿದು ಗಲಾಟೆ ಮಾಡಿ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಪೊಲೀಸರು ಪತಿ ರಂಗಣ್ಣನನ್ನು ಸರಿಯಾಗಿ ವಿಚಾರಿಸಿದ್ದಾರೆ. ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಾ ರಂಗಣ್ಣ, ಕುಡಿದ ಮತ್ತಿನಲ್ಲಿ ಎಲ್ಲಾ ಅನಾಹುತ ನಡೆಯುತ್ತಿದೆ ಸರ್ ಅಂತ ಹೇಳಿದ್ದಾನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಆತನನ್ನು ವಿಚಾರಿಸಿ, ಮಧ್ಯಾಹ್ನ ಊಟವನ್ನು ಅಲ್ಲೇ ಮಾಡಿ ಮಧ್ಯಾಹ್ನದ ನಂತರವೂ ದಂಪತಿಗಳನ್ನು ಕೂರಿಸಿ ಸಂಧಾನ ಮುಂದುವರಿಸಿದರು.

ಸಂಜೆಯಾಗುತ್ತಿದ್ದಂತೆ ಗಂಡ ರಂಗಣ್ಣನಿಗೆ ತನ್ನ ತಪ್ಪಿನ ಅರಿವಾಗಿದ್ದು ಪೊಲೀಸರ ಮುಂದೆಯೇ ಕಣ್ಣಿರು ಹಾಕಿ ಪತ್ನಿ ಸುಶೀಲ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ನಾನು ಇನ್ನೂ ಕುಡಿಯುವುದನ್ನು ಬಿಡುತ್ತೇನೆ. ಹೆಂಡತಿಯನ್ನು ಇನ್ನೂ ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇನ್ನೂ ಮುಂದಕ್ಕೆ ಕುಡಿದು ಗಲಾಟೆ ಮಾಡಿದರೆ ನನ್ನ ಮೇಲೆ ಕೇಸ್ ಮಾಡಿ ಜೈಲಿಗೆ ಹಾಕಿ ಸರ್ ಎಂದೂ ಪೊಲೀಸರೊಂದಿಗೆ ಅಂಗಲಾಚಿಕೊಂಡ. 2 ವರ್ಷದಿಂದ ಗಂಡನ ಕಿರುಕುಳದಿಂದ ಬೇಸೆತ್ತ ಸುಶೀಲ, ಹಾಗೂ ರಂಗಣ್ಣ ಉತ್ತಮ ಜೀವನಕ್ಕೆ ದಾರಿತೋರಿಸಿದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಮತ್ತು ತಂಡಕ್ಕೆ ಧನ್ಯವಾದ ತಿಳಿಸಿದರು.

ಲಾಟಿ ಏಟು, ಧಮ್ಕಿ ಇದು ಮಾತ್ರವಲ್ಲದೆ ತಾಳ್ಮೆ, ಪ್ರೀತಿ, ಬುದ್ದಿಮಾತಿನಿಂದಲೂ ವ್ಯಕ್ತಿಗಳನ್ನು, ಸಮಾಜವನ್ನು ತಿದ್ದಬಹುದು ಎಂದು ಧರ್ಮಸ್ಥಳ ಪೊಲೀಸರು ತೋರಿಸಿಕೊಟ್ಟಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದವರು ಈ ಹಿಂದೆ ಕೂಡ ಹಲವು ಸಮಾಜಮುಖಿ ಕೆಲಸ ಮಾಡಿದ್ದು, ಪತ್ತೆಯಾಗದ ಅನೇಕ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಕಾನೂನು ಮುಂದೆ ನಿಲ್ಲಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏನೂ ಪ್ರಕರಣ ನಡೆದರೂ ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರತಿಯೊಬ್ಬ ಸಿಬ್ಬಂದಿಯೂ ಕೂಡ ಅದರ ಬೆನ್ನುಬಿದ್ದು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ.

error: Content is protected !!