‘ಹಿಂದುತ್ವದ ಬಗ್ಗೆ ನನ್ನನ್ನು ಪ್ರಶ್ನಿಸುವ ನೈತಿಕತೆ ಶಾಸಕ ಹರೀಶ್ ಪೂಂಜರಿಗೆ ಇಲ್ಲ: ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದು ನನ್ನ ಹಿಂದುತ್ವವಾಗಿದೆ’ : ಶಾಸಕ ಹರೀಶ್ ಪೂಂಜರ ಹಿಂದುತ್ವದ ಪ್ರಶ್ನೆಗೆ ಮಹೇಶ್ ಶೆಟ್ಟಿ ತಿಮರೋಡಿ ಖಡಕ್ ಉತ್ತರ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಚುನಾವಣೆ ಗೆದ್ದು ಅಭಿನಂದನಾ ಸಭೆಯಲ್ಲಿ ಮಾತನಾಡುತ್ತ, ‘ಹಿಂದುತ್ವದ ಕೇಸರಿ ಶಾಲು ಹಾಕಿಕೊಂಡು ಹಿಂದುತ್ವ ಅಂತ ಹೇಳಿ ತಿರುಗಿ, ದಿನಕ್ಕೆ 200 ಜನರಿಗೆ ಕರೆ ಮಾಡಿ ಕಾಂಗ್ರೆಸ್‌ಗೆ ಓಟ್ ಹಾಕಿ ಅಂತ ಗಂಟಗಟ್ಟಲೆ ಮಾತನಾಡಿದ್ರಲ್ಲ ಮಹೇಶ್ ಶೆಟ್ರೆ, ನಾನು ಮಾಡಿದ ತಪ್ಪು ಏನೆಂದು ಪ್ರಶ್ನಿಸಿದ್ರು. ಈ ಪ್ರಶ್ನೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರು ಪತ್ರಿಕಾಗೋಷ್ಠಿ ಮೂಲಕ ಉತ್ತರ ನೀಡಿದ್ದಾರೆ.

ಮೇ.26ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1992 ರಿಂದ ಸುಮಾರು 31 ವರ್ಷಗಳಿಂದ ಹಿಂದುತ್ವದ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು ಪ್ರಾರಂಭದಲ್ಲಿ ನನ್ನಲ್ಲಿ ಯಾವುದೇ ವಾಹನವಿಲ್ಲದೆ ಇದ್ದರೂ ತಾಲೂಕಿನ ಮೂಲೆ ಮೂಲೆಗೂ ಸಂಚರಿಸಿ ಸಂಘಟನೆಯನ್ನು ಕಟ್ಟಿ ಬೆಳೆಸಿ, ಸಂಘಟನೆಯ ಹಲವು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ನ್ಯಾಯ ಒದಗಿಸಿದ್ದೇನೆ. ಸಂಘದ ಜವಾಬ್ದಾರಿಯಿಂದ ವಿಮುಕ್ತವಾದ ನಂತರದ ದಿನಗಳಲ್ಲಿಯೂ ಸಂಘ ನೀಡಿದ ಶಿಕ್ಷಣದಿಂದ ನನ್ನದೇ ರೀತಿಯಲ್ಲಿ ಹಿಂದುತ್ವ ಹೋರಾಟ ಮಾಡಿಕೊಂಡು ಬಂದಿದ್ದು, ಧರ್ಮದ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದೆ ಧರ್ಮ ನಿಷ್ಠೆಯನ್ನು ಹೊಂದಿ ದೇಶದ ಯಾವುದೇ ಮೂಲೆಯಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮತ್ತು ಅನ್ಯಾಯವಾದಾಗ ಸಾವಿರಾರು ಕಾರ್ಯಕರ್ತರನ್ನು ಸೇರಿಸಿಕೊಂಡು ಹೋರಾಟ ಮಾಡಿ ಧರ್ಮ ಜಾಗೃತಿಯನ್ನು ಮಾಡಿದ್ದೇನೆ. ಹಿಂದೂ ಹೆಣ್ಣು ಮಕ್ಕಳಿಗೆ ಅನ್ಯ ಧರ್ಮೀಯರಿಂದ ಅನ್ಯಾಯವಾದಾಗ ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಂತು ಉಗ್ರವಾಗಿ ಪ್ರತಿಭಟಿಸಿ ಹಲವಾರು ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ್ದೇನೆ. ಇಷ್ಟೆಲ್ಲಾ ಹಿಂದುತ್ವ ಪರವಾದ ಹೋರಾಟದಲ್ಲಿ ನನಗೆ ದಕ್ಕಿದ್ದು ಸುಮಾರು 35 ಕ್ಕೂ ಹೆಚ್ಚು ಕೇಸುಗಳು ಮಾತ್ರ ಎಂದಿದ್ದಾರೆ.

ನನ್ನ ಜೀವನದ ಬಹುಪಾಲು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ಗೆ ಅಲೆದಾಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಕೇವಲ ಹಿಂದೂ ಧರ್ಮದ ರಕ್ಷಣೆಯ ಸಲುವಾಗಿ ಅನ್ಯಧರ್ಮೀಯರು ಮಾರಕಾಸ್ತ್ರ ಹಿಡಿದು ನನ್ನ ವಿರುದ್ಧ ನಿಂತಾಗಲೂ ಕೂಡ ಎದೆಗುಂದದೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದು ನನ್ನ ಹಿಂದುತ್ವವಾಗಿದೆ. ಈ ಬಗ್ಗೆ ನನ್ನನ್ನು ಪ್ರಶ್ನಿಸುವ ನೈತಿಕತೆ ಶಾಸಕ ಹರೀಶ್ ಪೂಂಜರಿಗೆ ಇಲ್ಲ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಮನೋಜ್ ಕುಂಜರ್ಪ, ಪುರಂದರ ಸುರ್ಯ, ಸಂತೋಷ್ ಕಡಂಬು, ಅಶ್ವಥ್ ಕುಕ್ಕೆಡಿ, ವೆಂಕಪ್ಪ ಕೋಟ್ಯಾನ್ ಇಂದಬೆಟ್ಟು, ಪ್ರಜ್ವಲ್ ಕಲ್ಮಂಜ ಉಪಸ್ಥಿತರಿದ್ದರು.

error: Content is protected !!