ಬೆಳ್ತಂಗಡಿಯಲ್ಲಿ ಲೋಕ ಸಂಪರ್ಕ-2023 ಸದ್ಭಾವ ಸಂಕಲ್ಪ ಸಮಾವೇಶ:ವಿಧಾನ ಸಭಾ ಚುನಾವಣೆ ಹಾಗೂ ಲೋಕ‌ ಸಂಪರ್ಕದ ಕುರಿತು ಮಾರ್ಗದರ್ಶನ

ಬೆಳ್ತಂಗಡಿ: ಲೋಕ ಸಂಪರ್ಕ-2023 ಧ್ಯೇಯವಾಕ್ಯದಡಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಸದ್ಭಾವ ಸಂಕಲ್ಪ ಸಮಾವೇಶ ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್. ಅವರು ಮುಂಬರುವ ವಿಧಾನ ಸಭಾ ಚುನಾವಣೆ ಹಾಗೂ ಲೋಕ‌ ಸಂಪರ್ಕದ ಕುರಿತು ಮಾರ್ಗದರ್ಶನ ನೀಡುತ್ತಾ ಸಂತ ಶಕ್ತಿ, ಸುಪ್ತ ಶಕ್ತಿ, ಮಾತೃ ಶಕ್ತಿ, ಸದ್ಬಾವ ಶಕ್ತಿ, ಯುವ ಶಕ್ತಿ ಹಾಗೂ ಸಾಮಾಜಿಕ ಜಾಲತಾಣ ಶಕ್ತಿಗಳಿಂದ ರಾಷ್ಟ್ರ ಕಟ್ಟುವ ಕಾರ್ಯ ಆಗಬೇಕಾಗಿದೆ. ರಾಷ್ಟ್ರೀಯ ಚಿಂತನೆಗಳನ್ನು ಒಳಗೊಂಡ ತಂಡದಿಂದ ಲೋಕ ಸಂಪರ್ಕ ಕಾರ್ಯ ಮಾಡಬೇಕು. ಎಲ್ಲರೂ ರಾಷ್ಟ್ರೀಯತೆಯ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದರು.

ಸಮಾವೇಶದಲ್ಲಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದು ಲೋಕ ಸಂಪರ್ಕದ ಕುರಿತು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕರ್ತರ ಪ್ರಶ್ನೆಗಳಿಗೆ ಪ್ರಾಂತ ಸಹಕಾರ್ಯವಾಹರು ಸಮರ್ಪಕವಾಗಿ ಉತ್ತರಿಸಿದರು.

ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಸಹ ಕಾರ್ಯವಾಹ ನವೀನ್ ಪ್ರಸಾದ್ ಕೈಕಾರ್, ಪರಿವಾರ ಸಂಘಟನೆಯ ಪ್ರಮುಖರಾದ ಭಾಸ್ಕರ ಧರ್ಮಸ್ಥಳ, ನವೀನ ನೆರಿಯ, ಸಂತೋಷ್ ಕಾಪಿನಡ್ಕ, ರವಿ ಇಲಂತಿಲ, ಜಯರಾಜ್ ಸಾಲ್ಯಾನ್ ಇನ್ನೂ ಅನೇಕರು ಉಪಸ್ಥಿತರಿದ್ದರು.

ವಿಧಾನಸಭಾ ಚುನಾವಣಾ ಮತ್ತು ಲೋಕಸಂಪರ್ಕ ತಾಲೂಕು ಸಂಚಾಲಕ ಶಿವಪ್ರಸಾದ ಮಲೆಬೆಟ್ಟು ವರದಿ ನೀಡಿದರು.‌ ಬಿ.ಎಂ.ಎಸ್ ಜಿಲ್ಲಾಧ್ಯಕ್ಷ, ಸುಪ್ತ ಶಕ್ತಿಯ ತಾಲೂಕು‌ ಪ್ರಮುಖ್ ಅನಿಲ್ ಕುಮಾರ್ ಯು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!