ಎರಡು ತಿಂಗಳಲ್ಲಿ ಸಾರಿಗೆ ಸಚಿವರ ಮೂಲಕ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ: ಹರೀಶ್ ಪೂಂಜ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಕಾರ್ಯಕ್ರಮ

 

ಬೆಳ್ತಂಗಡಿ: ತಾಲೂಕಿನಲ್ಲಿ ಸಮರ್ಪಕವಾದ ಬಸ್ ನಿಲ್ದಾಣವಿಲ್ಲದೇ ಯಾರಾದರೂ ಬಸ್ಸ್ ನಿಲ್ದಾಣವೆಲ್ಲಿ ಎಂದು ಕೇಳಿದಾಗ ಪತ್ರಿಕಾಭವನದ ಎದುರು ಇರುವ ಬಸ್ ತಂಗುದಾಣದಲ್ಲಿರುವ ನಾಲ್ಕು ಕಬ್ಬಿಣದ ಕುರ್ಚಿಗಳನ್ನು ತೋರಿಸಬೇಕಿತ್ತು .ಅದರೆ ತಾಲೂಕಿಗೆ ಸುಸಜ್ಜಿತವಾದ ಬಸ್ ನಿಲ್ದಾಣವಾಗಬೇಕು ಎಂಬ ನಿಟ್ಟಿನಲ್ಲಿ ಇನ್ನು ಎರಡು ತಿಂಗಳಲ್ಲಿ ಸಾರಿಗೆ ಸಚಿವರ ಮೂಲಕ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

 

 

ಅವರು ಜುಲೈ 09 ರಂದು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಜರುಗಿದ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರ 8 ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ನಾಡಿನೆಲ್ಲೆಡೆಯಿಂದ ಬರುವಂತಹ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ತಾಲೂಕಿನ ಕೇಂದ್ರ ಭಾಗದಲ್ಲಿ ಬಸ್ಸ್ ತಂಗುದಾಣವಾದಲ್ಲಿ ತಾಲೂಕಿಗೆ ರಾಜ್ಯದ ವಿವಿಧ ಭಾಗಗಳಿಂದ ಬಸ್ಸುಗಳು ಬರುವಂತಾಗಿ ನಮ್ಮ ಜನರಿಗೂ ಅನುಕೂಲವಾಗಲಿದೆ.

 

 

ಗ್ರಾಮೀಣ ಭಾಗದ ಸಾಮಾನ್ಯ ಕೃಷಿಕನ ಮಗನಾದ ನಾನು ಚುನಾವಣೆ ನಿಂತ ಸಂದರ್ಭದಲ್ಲಿ ಈ ಯುವಕ ಯಾವ ರೀತಿ ತಾಲೂಕನ್ನು ಮುನ್ನಡೆಸಬಹುದು ಎಂಬ ಆತಂಕ ಕೆಲವರಿಗೆಲ್ಲ ಇದದ್ದು ಸಹಜ. ಅದರೆ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿಯ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಸಂಕಲ್ಪ ಎಂದು ನೀಡಿದ ಭರವಸೆಯಂತೆ ಕಳೆದ ನಾಲ್ಕು ವರುಷಗಳಲ್ಲಿ ಅಭಿವೃದ್ಧಿ ಮೂಲಕ ಕಾರ್ಯಗತ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.ಕಳೆದ 70 ವರ್ಷಗಳಲ್ಲಿ ಆಗದಂತಹ ಅಭಿವೃದ್ಧಿಗಳು ಕೇವಲ ನಾಲ್ಕು ವರುಷಗಳಲ್ಲಿ ಆಗಿದೆ. ತಾಲೂಕಿನಲ್ಲಿ  1800 ಕೋಟಿ ಅನುದಾನಗಳ ಮೂಲಕ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರದ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಎಲ್ಲವೂ ಈಡೇರುತ್ತಿದೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾಧನೆ ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಅವರನ್ನು ರಾಜ್ಯ ಸಭೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಬೆಳ್ತಂಗಡಿಗೆ ವಿಶೇಷ ಗೌರವ ಸ್ಥಾನ ಮಾನ ಸಿಕ್ಕಿದೆ ಎಂದರು.

 

 

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಯವರು ಭಾರತ ದೇಶವನ್ನು ತಮ್ಮ ಆಡಳಿತದ ಮೂಲಕ ಜಗತ್ತು ಗುರುತಿಸುವಂತೆ ಮಾಡಿದ್ದಾರೆ.ಅವರ ಸಾಧನೆಗಳು ದೇಶದ ಕೀರ್ತಿಯನ್ನು ಹೆಚ್ಚಿಸಿವೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಮ್ಮ ಪ್ರಾಮಾಣಿಕ, ಚೈತನ್ಯ ಶೀಲ ವ್ಯಕ್ತಿತ್ವದ ಮೂಲಕ ತಾಲೂಕಿನ ಜನರ ಭರವಸೆ ಈಡೇರಿಸುವ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್,ಪ್ರಧಾನಿ ಮೋದಿ ಯವರ ಸರಕಾರ 8ವರ್ಷಗಳ ದಕ್ಷ ಆಡಳಿತ ಪೂರೈಸಿದ ಹಿನ್ನಲೆಯಲ್ಲಿ ತಾಲೂಕಿನಲ್ಲಿ 8ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ತಾಲೂಕಿನ ನಾನಾ ಸಾಧಕರನ್ನು ಗೌರವಿಸುವ ಕೆಲಸ,ಸವಲತ್ತು ವಿತರಣೆ ಮಾಡಲಾಗಿದೆ ಎಂದರು.

ಮಾಜಿ ಶಾಸಕ ಪ್ರಭಾಕರ ಬಂಗೇರ,ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ್, ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ಚೆನ್ನಕೇಶವ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್,ಹಿರಿಯ ಮುಖಂಡ ಕುಶಾಲಪ್ಪ ಗೌಡ, ಪದಾಧಿಕಾರಿ ಧನಲಕ್ಷ್ಮಿ ಜನಾರ್ಧನ್, ಶ್ರೀನಿವಾಸ್ ರಾವ್, ಕಾರ್ಯದರ್ಶಿ ಪ್ರಶಾಂತ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 411 ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ನಿರೂಪಿಸಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಧನ್ಯವಾದವಿತ್ತರು.

error: Content is protected !!