ಪ್ರತಿಯೊಬ್ಬರೂ ಸಮಾಜಧರ್ಮ, ಆತ್ಮಧರ್ಮ, ದೇಶಧರ್ಮ ಪಾಲಿಸುವುದು ಅವಶ್ಯ: ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ‌ ಆಶೀರ್ವಚನ: ಕಳಿಯ, ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ, ನರ್ತನ ಸೇವೆ ಅಂಗವಾಗಿ ಧಾರ್ಮಿಕ ಸಭೆ

 

 

 

 

 

ಬೆಳ್ತಂಗಡಿ: ದೇವರಲ್ಲಿ ನಂಬಿಕೆ, ಶ್ರದ್ಧೆ, ಭಕ್ತಿ ಭಾರತೀಯರಲ್ಲಿರುವಷ್ಟು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ನಾವು ಇಂಗ್ಲೀಷರಿಂದ ಶಿಸ್ತು ಕಲಿತದ್ದಲ್ಲ ನಾವು ಭಾರತೀಯ ದೈವ ಪರಂಪರೆಯಿಂದ ಶಿಸ್ತನ್ನು ಕಲಿತಿದ್ದೇವೆ. ಧರ್ಮದಿಂದ ಇರುವವರಿಗೆ ಮಾತ್ರ ದೇವರ ಅನುಗ್ರಹ ಸಿಗಲು ಸಾಧ್ಯ ಅದಕ್ಕಾಗಿ ಪ್ರತಿಯೊಬ್ಬರೂ ಸಮಾಜಧರ್ಮ, ಆತ್ಮಧರ್ಮ, ದೇಶಧರ್ಮವನ್ನು ಪಾಲಿಸಬೇಕು ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ನುಡಿದರು.
ಅವರು ಕಳಿಯ ಗ್ರಾಮದ ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ಡಿ.21 ರಿಂದ 26ರವರೆಗೆ ನಡೆಯಲಿರುವ ಉಳ್ಳಾಕುಲು-ಉಳ್ಳಾಲ್ತಿ, ರಕ್ತೇಶ್ವರೀ, ಮಹಿಷಂತಾಯ, ಪಂಜುರ್ಲಿ ದೈವಗಳ ಮತ್ತು ಮಂಜಲಡ್ಕ ದೈವ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ಹಾಗೂ ಕಲ್ಕುಡ ದೈವಗಳ ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ ಕಾರ್ಯಕ್ರಮದ ಅಂಗವಾಗಿ ಡಿ.21ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಜೀವನದ ಆದರ್ಶ ಬದುಕನ್ನು ಭೂತಾರಾಧನೆಯಿಂದ ಪಡೆಯಬಹುದು. ಮನುಷ್ಯರಲ್ಲಿ ಭಕ್ತಿ, ಶ್ರದ್ಧೆ, ಒಗ್ಗೂಡುವ ಶಕ್ತಿ ಇದ್ದಾಗ ದೈವ ನರ್ತನ ಒಳಿಯಲು ಸಾಧ್ಯ. ದೈವ ದೇವರ ಮೇಲೆ ನಂಬಿಕೆ ಇಲ್ಲದವರಿಗೆ ಯಾವ ದೇವರ ಆಶಿರ್ವಾದವೂ ಸಿಗಲು ಸಾಧ್ಯವಿಲ್ಲ ಎಂದರು.
ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ದೈವ ದೇವರನ್ನು ಆತ್ಮದಲ್ಲಿ, ಗುಡಿ ಮಂದಿರದಲ್ಲಿ ಆರಾಧಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುವ ಪರಂಪರೆ ಇದ್ದರೆ ಅದು ಭಾರತದಲ್ಲಿ ಮಾತ್ರ ವಿದೇಶಗಳಲ್ಲಿ ದೇವರುಗಳನ್ನು ಮ್ಯೂಸಿಯಂಗಳಲ್ಲಿ ಇಟ್ಟು ಪ್ರಾರ್ಥಿಸುವ ಪರಂಪರೆ ಇಂದಿಗೂ ಮುಂದುವರೆದಿದೆ. ಭಾರತದ ಮೇಲೆ ಅದೆಷ್ಟೋ ಬಾರಿ ಬೇರೆ ಬೇರೆ ವರ್ಗಗಳು ದಾಳಿ ನಡೆಸಿದರೂ ಹಿಂದುಗಳ ಧಾರ್ಮಿಕ ಚಿಂತೆನೆಯನ್ನು ತೊಲಗಿಸಲು ಸಾಧ್ಯವಾಗಲಿಲ್ಲ. ಭಾರತದ ಧಾರ್ಮಿಕ ಚಿಂತನೆಗೆ ಇತಿಹಾಸವಿದೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಐದು ಸಾವಿರಕ್ಕೂ ಅಧಿಕ ದೇವಸ್ಥಾನಗಳು ನಿರ್ಮಾಣವಾಗಿದೆ. ತುಳು ನಾಡಿನಲ್ಲಿ ಎರಡು ಸಾವಿರಕ್ಕೂ ಅಧಿಕ ದೈವಗಳನ್ನು ಹೊಂದಿದ ಇತಿಹಾಸವಿದೆ. ಅಲ್ಲದೆ ಹದಿನಾರು ಸಮುದಾಯಗಳು ದೈವರಾಧನೆಯಲ್ಲಿ ತೊಡಗಿ ಇತಿಹಾಸವನ್ನು ಸೃಷ್ಠಿಸಿದೆ. ಧಾರ್ಮಿಕ ಪ್ರಜ್ಞೆ, ದೇಶಿಯ ಚಿಂತನೆ, ಪರಿಸರ ಚಿಂತನೆ, ಸಾಂಸ್ಕೃತಿಕ ಪ್ರಜ್ಞೆ ಇಲ್ಲದಿದ್ದರೆ ದೇಶಕ್ಕೆ ಅಪಾಯ ಇದೆಲ್ಲವೂ ದೇಶದ ಸಂಪತ್ತಾಗಿದೆ ಎಂಬುದನ್ನು ಎಲ್ಲರು ತಿಳಿಯುವ ಅಗತ್ಯವಿದೆ. ಇದೆಲ್ಲವನ್ನು ಬೆಳೆಸುವ ಮನೋಭಾವವನ್ನು ಬೆಳೆಸಿಕೊಂಡಾಗ ಭಾರತ ಜಗತ್ತಿನಲ್ಲಿ ಶ್ರೇಷ್ಠ ಭಾರತವಾಗಲು ಸಾಧ್ಯ ಎಂದರು.
ಕಳಿಯಬೀಡು ದೇವಪಾಲ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಚೆನ್ನೈನ ಸುಕೀರ್ತಿ ಜೈನ್,  ಉದ್ಯಮಿ ಬರೋಡ ತುಳು ಸಂಘದ ಅಧ್ಯಕ್ಷ  ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಆಹಾರೋದ್ಯಮಿ ಶಿವಶಂಕರ್ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ., ಕಳಿಯ ಗ್ರಾ.ಪಂ. ಸದಸ್ಯರುಗಳ, ಊರಿನ ಪ್ರಮುಖ ಸಂಘ-ಸಂಸ್ಥೆ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್  ಕಳಿಯಬೀಡು ಸ್ವಾಗತಿಸಿದರು. ಕಲಶಾಭಿಷೇಕ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಪ್ರಾಸ್ತಾವಿಸಿದರು. ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ವಂದಿಸಿ. ದಿನೇಶ್ ಸುವರ್ಣ ನಿರೂಪಿಸಿದರು.

error: Content is protected !!