ಕೊರೊನಾ ಮುಕ್ತ ಗ್ರಾಮ ಪಂಚಾಯತ್ ಸಂಕಲ್ಪವಾಗಲಿ: ಗ್ರಾ.ಪಂ. ಸದಸ್ಯರಿಗೆ‌ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್ ಕಿವಿಮಾತು: ಹಬೆ ಯಂತ್ರ ಹಸ್ತಾಂತರ

ಬೆಳ್ತಂಗಡಿ:‌ ಕೊರೊನಾ ತಡೆಗಟ್ಟುವಲ್ಲಿ ಗ್ರಾಮ ಪಂಚಾಯತ್ ಗಳ ಜವಾಬ್ದಾರಿ ಹೆಚ್ಚಿದೆ ಅದ್ದರಿಂದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳು ತಮ್ಮ ವಾರ್ಡ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಕಾರ್ಯನಿರ್ವಹಿಸಿ ಕೊರೊನಾ ಮುಕ್ತ ಪಂಚಾಯತ್ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ ಕೆ. ಧನಂಜಯ ರಾವ್ ಹೇಳಿದರು.

ಅವರು ಲಾಯಿಲ ಗ್ರಾಮ ಪಂಚಾಯತ್ ಗೆ ಹಬೆ ಯಂತ್ರ ಹಸ್ತಾಂತರಿಸಿ ಮಾತನಾಡಿದರು.‌

ಕೊರೊನಾ ಸೋಂಕು ಹರಡದಂತೆ ಎಲ್ಲರೂ ಒಗ್ಗಟ್ಟಾಗಿ ಜನರಲ್ಲಿ ಜಾಗೃತಿ ಮೂಡಿಸಿ ಇಡೀ ಗ್ರಾಮವನ್ನು ಕೊರೊನಾ ಮುಕ್ತವಾಗಿಸುವಲ್ಲಿ ಶ್ರಮ ಪಡಬೇಕು. ಜನರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸಿ ಅವರಿಗೆ ಧೈರ್ಯ ನೀಡುವಂತಹ ಕೆಲಸನ್ನು ಮಾಡಬೇಕು. ಈ ನಿಟ್ಟಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಎಲ್ಲಾ ರೀತಿಯ ಸಹಕಾರ ಪಂಚಾಯತ್ ಗೆ ನೀಡಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ಡಾನ, ಈಗಾಗಲೇ ಬೆಳ್ತಂಗಡಿ ರೋಟರಿ ಕ್ಲಬ್ ಪಂಚಾಯತ್ ಗೆ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಇದೀಗ ಕೊರೊನಾ ಸಂದರ್ಭದಲ್ಲೂ ಜನರ ಉಪಯೋಗಕ್ಕಾಗಿ ಸ್ಟೀಂ ಮೆಷಿನ್ ನೀಡಿರುವುದಕ್ಕೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಧನಂಜಯ ರಾವ್ ಅವರು ಗ್ರಾ.ಪಂ. ಅಧ್ಯಕ್ಷೆ , ಉಪಾಧ್ಯಕ್ಷ, ಪಿಡಿಒ ಮತ್ತು ಕಾರ್ಯದರ್ಶಿಯನ್ನು ಗೌರವಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಒಳಗಾದವರಿಗೆ ಸ್ಟೀಂ ಮೆಷಿನ್ ಹಸ್ತಾಂತರಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಆರ್. ಸದಸ್ಯರಾದ ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ ಎಣಿಂಜೆ, ಅರವಿಂದ ಲಾಯಿಲ, ಸುಗಂಧಿ ಜಗನ್ನಾಥ್, ಹರಿಕೃಷ್ಣ, ಆಶಾಲತಾ, ಜಯಂತಿ , ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧಾಕರ್ ಬಿ.ಎಲ್., ಪಂಚಾಯತ್ ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಅಬೂಬಕ್ಕರ್ , ಶ್ರೀಶ ಕುಮಾರ್, ಲೆಕ್ಕ ಸಹಾಯಕಿ ರೇಶ್ಮಾ ಮ ಗಂಜಿಗಟ್ಟಿ, ಅನಿಲ್ ಕುಮಾರ್, ಪ್ರಶಾಂತ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಟ್ಟಸ್ವಾಮಿ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ ವಂದಿಸಿದರು.

error: Content is protected !!