ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನ ಬಂಧನ: ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ: ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಆಯುಕ್ತರಿಂದ ₹10 ಸಾವಿರ ನಗದು ಬಹುಮಾನ: ಕಾಮುಕನಿಗೆ ಯುವತಿಯಿಂದ ಕಪಾಳಮೋಕ್ಷ

 

ಮಂಗಳೂರು: ಬಸ್​​ನಲ್ಲಿ ಯುವತಿಯೋರ್ವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ‌ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಪೊಲೀಸರ ಸಮ್ಮುಖದಲ್ಲಿಯೇ ಯುವತಿ ಕಪಾಳಮೋಕ್ಷ ಮಾಡಿದ್ದಾಳೆ.

ಘಟನೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾಹಿತಿ ನೀಡಿದ್ದು, ಘಟನೆಗೆ ಕಾರಣಕರ್ತನಾದ ಕೇರಳ, ಕಾಸರಗೋಡು ಜಿಲ್ಲೆಯ ಪೆರ್ಲ, ಕೆದಿಮೂಲೆ ನಿವಾಸಿ ಹುಸೈನ್ (41) ಬಂಧಿತ ಆರೋಪಿಯಾದ್ದಾನೆ ಎಂದು ತಿಳಿಸಿದ್ದಾರೆ.
ಜ.14 ರಂದು‌ ಮಧ್ಯಾಹ್ನ 3.45 ಸುಮಾರಿಗೆ ಯುವತಿ ನಗರದ ಅಸೈಗೋಳಿಯಿಂದ ಮಂಗಳೂರು ಕಡೆಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಬಳಿಯಲ್ಲಿ ಅಪರಿಚಿತನೋರ್ವ ಬಸ್ ಹತ್ತಿದ್ದು, ಆಕೆಯ ಪಕ್ಕದ ಸೀಟ್​ನಲ್ಲಿ‌ ಕುಳಿತಿದ್ದಾನೆ. ಸ್ವಲ್ಪ ಹೊತ್ತು ಫೋನ್​ನಲ್ಲಿ‌ ಮಾತನಾಡುವಂತೆ ನಟಿಸಿ ಯುವತಿಯನ್ನು ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ. ಯುವತಿ ಇದನ್ನು ಪ್ರತಿಭಟಿಸಿದಾಗ ಬಸ್​ನಿಂದ ಇಳಿದು ಹೋಗಿದ್ದಾನೆ. ಅದಾಗಿ ಮೂರು ಸ್ಟಾಪ್ ಕಳೆದ ಮೇಲೆ ಇನ್ನೊಂದು ಬಸ್​ನಿಂದ‌ ಇಳಿದ ಆತ, ಮತ್ತೆ ಯುವತಿಯಿದ್ದ ಬಸ್​​ಗೆ ಹತ್ತಿ, ಮತ್ತೆ ಆಕೆಯ ಪಕ್ಕದಲ್ಲಿಯೇ ಕುಳಿತು ತೊಂದರೆ ನೀಡಲು‌ ಆರಂಭಿಸಿದ್ದ ಇದರಿಂದ ಬೇಸತ್ತ ಯುವತಿ ಇದು ಮಹಿಳೆಯರಿಗೆ ಮೀಸಲಿರಿಸಿದ ಸೀಟ್, ಪುರುಷರ ಸೀಟ್​ನಲ್ಲಿ‌ ಕುಳಿತುಕೊಳ್ಳಿ ಎಂದು ತಿಳಿಸಿದರೂ ಆತ ಗಣನೆಗೆ ತೆಗೆದುಕೊಳ್ಳದೆ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ.

ಕಿರುಕುಳದ ಬಗ್ಗೆ ಬಸ್ ನಿರ್ವಾಹಕ, ಚಾಲಕ ಹಾಗೂ ಉಳಿದ ಪ್ರಯಾಣಿಕರಿಗೆ ತಿಳಿದರೂ ಮೌನ ವಹಿಸಿದ್ದರು. ಯುವತಿ ಆರೋಪಿ ಬಳಿ, ನಿನ್ನ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವೆ ಎಂದರೂ ಆರೋಪಿ‌ ಮುಖದಿಂದ ಮಾಸ್ಕ್ ತೆಗೆದು ಫೋಟೋ ತೆಗೆಯುವಂತೆ ತಿಳಿಸಿ ಪೋಸ್ ನೀಡಿದ್ದಾನೆ. ಅದೇ ದಿನ ಯುವತಿ ತನ್ನಂತೆ ಬೇರೆಯವರಿಗೂ ‌ಆಗಬಾರದೆಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ‌, ಆರೋಪಿಯ ನೀಚ ಕೃತ್ಯದ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ‌ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಳು. ಈ ಬರಹ ವೈರಲ್ ಆಗಿತ್ತು. ಯುವತಿಗೆ ನೈತಿಕ ಬೆಂಬಲವಾಗಿ ನಿಂತ ಸಾಮಾಜಿಕ ಕಾರ್ಯಕರ್ತೆ ಡಾ. ವಿದ್ಯಾ ಅವರೊಂದಿಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು‌.

ಮಂಗಳೂರು ಉಪ ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ್ ಎ. ಗಾಂವ್ಕರ್ ಅವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ‌ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಅವರ ನಿರ್ದೇಶನದಂತೆ, ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ, ಉಪ ನಿರೀಕ್ಷಕ, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಪ್ರಕರಣ ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು‌ ಯಶಸ್ವಿಯಾಗಿ ಬೇಧಿಸಿದ ಪೊಲೀಸ್ ತಂಡಕ್ಕೆ ಆಯುಕ್ತರು ಅಭಿನಂದನೆ ಸಲ್ಲಿಸಿ, 10 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಿದರು. ಘಟನೆಯನ್ನು ಧೈರ್ಯದಿಂದ ಎದುರಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದು ದೂರು ನೀಡಿರುವ ಯುವತಿಯನ್ನೂ ಅಭಿನಂದಿಸಿ, ಸನ್ಮಾನ ಮಾಡಿದ್ದಾರೆ..
ಸಂತ್ರಸ್ತ ಯುವತಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಆರೋಪಿಯನ್ನು ಸೆರೆ ಹಿಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಅದೇ ರೀತಿ ಪ್ರತಿದಿನ ಬಸ್ ನಲ್ಲಿ ಪ್ರಯಾಣ ಮಾಡುವ ಯುವತಿಯರು, ಮಹಿಳೆಯರು ಮಾತ್ರವಲ್ಲದೆ ಯುವಕರೂ ಇಂತಹ ಕಿರುಕುಳ ಅನುಭವಿಸುತ್ತಿರುತ್ತಾರೆ. ಈ ಬಗ್ಗೆ ಧೈರ್ಯದಿಂದ ಮಾತನಾಡಿ, ಆಗ ಮಾತ್ರ ಇಂತಹ ಘಟನೆ ಕಡಿಮೆಯಾಗಲು ಸಾಧ್ಯ. ಅದೇ ರೀತಿ ಇಂತಹ ಘಟನೆಗಳಾದಾಗ ಬಸ್ ನಿರ್ವಾಹಕ ಹಾಗೂ ಉಳಿದ ಪ್ರಯಾಣಿಕರು ಸಂತ್ರಸ್ತರಿಗೆ ನೈತಿಕ ಬೆಂಬಲ‌ ನೀಡಬೇಕು ಎಂದು ತಿಳಿಸಿದರು.

error: Content is protected !!