ಕಳೆಂಜ: ಪ್ರಾಕೃತಿಕ ವಿಕೋಪ ಪೀಡಿತ ಕುಟುಂಬಕ್ಕೆ ಡಿ.ಕೆ. ಆರ್.ಡಿ.ಎಸ್‌ ನಿಂದ ಹೊಸ ಮನೆ ಹಸ್ತಾಂತರ

ಬೆಳ್ತಂಗಡಿ: ಕಳೆದ ವರ್ಷದ ಮಳೆ ಮತ್ತು ನೆರೆ ಸಂದರ್ಭ ಸೂರು ಕಳೆದುಕೊಂಡ ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಲಿಯಮ್ಮ ಅವರ ಕುಟುಂಬಕ್ಕೆ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ನೂತನ ಮನೆ ನಿರ್ಮಿಸಿ ನ.28 ರಂದು  ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಬಿಷಪ್ ಲಾರೆನ್ಸ್ ಮುಕ್ಕುಯಿರವರು ನೂತನ ಗೃಹದ ಉದ್ಘಾಟನೆಯನ್ನು ನೆರವೇರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ. ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಬೆಂಗಳೂರು ಮಹಾಧರ್ಮಪ್ರಾಂತ್ಯ, ಕಾರಿತಾಸ್ ಇಂಡಿಯಾ ನವದೆಹಲಿ, ಸಿ.ಎಮ್. ಐ ಸಂಸ್ಥೆ ಕೇರಳ ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆಯಾದ ಡಿ.ಕೆ.ಆರ್.ಡಿ.ಎಸ್ ಇವರ ಆರ್ಥಿಕ ಸಹಕಾರದಿಂದ ಈ ನೂತನ ಗೃಹ ನಿರ್ಮಾಣಗೊಂಡಿದೆ. ಇದು ಡಿ.ಕೆ.ಆರ್.ಡಿ.ಎಸ್ ಸಂಸ್ಥೆ ಸಹಾಯಧನದಲ್ಲಿ ಪ್ರಸ್ತುತ ವರ್ಷ ನಿರ್ಮಾಣವಾಗುತ್ತಿರುವ ಆರನೇ ಮನೆಯಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಂ. ಫಾ.  ಜೋಸೆಫ್ ಮುಕ್ಕಾಟ್,  ಸ್ಥಳೀಯ ಧರ್ಮಭಗಿನಿಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು. ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚಿನ ಧರ್ಮಗುರು  ವಂ. ಫಾ. ಫ್ರಾನ್ಸಿಸ್ ಓಡಂಪಳ್ಳಿ ಸ್ವಾಗತಿಸಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಮನೆಯವರಾದ ಜೋನ್ಸನ್‌ ರವರು ನೂತನ ಮನೆ ನಿರ್ಮಾಣದ ಕಾರ್ಯದಲ್ಲಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿ, ಧನ್ಯವಾದವಿತ್ತರು.

error: Content is protected !!