ಅಭಿವೃದ್ಧಿಯೊಂದಿಗೆ ಬೆಳ್ತಂಗಡಿ ಪ.ಪಂ. ರಾಜ್ಯದಲ್ಲೇ ಮಾದರಿಯಾಗಲಿದೆ: ಸಂಸದ ನಳಿನ್ ಕುಮಾರ್

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಈಗಾಗಲೇ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ತಾಲೂಕಿನಲ್ಲಿ ಮತದಾರರ ಮನ ಗೆದ್ದಿದ್ದಾರೆ. ಪಟ್ಟಣ ಪಂಚಾಯತ್‍ ಮುಂದಿನ 5 ವರ್ಷಗಳಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ. ಈ ಮೂಲಕ ರಾಜ್ಯದಲ್ಲೇ ಮಾದರಿಯಾದ ಪಟ್ಟಣ ಪಂಚಾಯತ್ ಆಗಿ ಈ ಪಂಚಾಯತನ್ನು ರೂಪುಗೊಳಿಸಲು ಬಿಜೆಪಿ ಉತ್ಸುಕವಾಗಿದೆ. ನಾನು ಹಾಗೂ ಶಾಸಕರು ಜೊತೆ ಸೇರಿ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ಪಟ್ಟಣ ಪಂಚಾಯತ್‍ಗೆ ಸಹಕಾರ ನೀಡಲಿದ್ದೇವೆ. ಭ್ರಷ್ಟಾಚಾರ ರಹಿತ ಆಡಳಿತ, ಜನರಿಗೆ ಸ್ಪಂದಿಸುವ ಇಚ್ಛಾಶಕ್ತಿ, ಎಲ್ಲಾ ಪಟ್ಟಣ ಪಂಚಾಯತ್ ಸದಸ್ಯರ ಸಹಕಾರದಿಂದ ಅವರ ಕ್ರಿಯಾಶೀಲತೆಯಿಂದ ಜನ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ವರ್ಷಗಳ ಕಾಲ ಬಿಜೆಪಿ ಆಡಳಿತ ಬರುವಂತೆ ಶಾಸಕರ ಮಾರ್ಗದರ್ಶನದಲ್ಲಿ ಇವರಿಬ್ಬರೂ ನೇತೃತ್ವ ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಂಸದ ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಅವರು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷೆ ರಜನಿ ಕುಡ್ವ ಹಾಗೂ ಉಪಾಧ್ಯಕ್ಷ ಜಯಾನಂದ ಗೌಡ ಅವರನ್ನು ಅಭಿನಂದಿಸಿ ಮಾತನಾಡಿದರು.


ಶಾಸಕರ ಅಭಿವೃದ್ಧಿ ಕಾರ್ಯ ಹಾಗೂ ಕಾರ್ಯವೈಖರಿಯನ್ನು ಗಮನಿಸಿ ಜನ ಆಶೀರ್ವಾದ ಮಾಡಿದ್ದಾರೆ. ಶಾಸಕರ ಆಯ್ಕೆಯಾದ ಒಂದು ವರ್ಷದೊಳಗಾಗಿ ಈ ಪ.ಪಂ. ಚುನಾವಣೆ ನಡೆದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ನಡೆಯುತ್ತದೆ ಎಂದು ಜನತೆ ಮತದಾನ ಮಾಡಿದರು. ಮೊತ್ತ ಮೊದಲ ಬಾರಿಗೆ ಈ ಪ.ಪಂ.ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಆ ಪ್ರಕಾರ ಅಧ್ಯಕ್ಷರಾಗಿ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆಯಾಗಿದ್ದಾರೆ, ಭಾರತೀಯ ಜನತಾ ಪಾರ್ಟಿ ಪರವಾಗಿ ಅವರಿಗೆ ಅಭಿನಂದನೆಗಳು, ಅಭಿವೃದ್ಧಿ ಪರವಾದ ಆಡಳಿತವನ್ನು ನಾವು ಕೊಡುತ್ತೇವೆ ಎಂದರು.
ಶಾಸಕರ ಶ್ರಮದಿಂದ ಗೆಲುವು:
ಇಂದು ರಾಜ್ಯದಲ್ಲಿ, ರಾಷ್ಟ್ರದಲ್ಲಿ ಅಭಿವೃದ್ಧಿ ಪರವಾದ ಆಡಳಿತಕ್ಕೆ ಬಿ.ಜೆ.ಪಿ. ಪೂರಕವಾಗಿರುವುದರಿಂದ ಜನತೆ ಆಶೀರ್ವಾದ ಮಾಡುತ್ತಿದ್ದಾರೆ. ಇದರಲ್ಲಿ ಬೆಳ್ತಂಗಡಿಯೂ ಒಂದಾಗಿದೆ. ಈ ಸಾಧನೆಗೆ ತಾಲೂಕಿನ ಶಾಸಕರಿಗೆ ವಿಶೇಷ ಅಭಿನಂದನೆಗಳು. ಅವರು ಚುನಾಯಿತರಾದ ಸಂದರ್ಭದಲ್ಲೇ ಈ ಚುನಾವಣೆ ಬಂದಿತ್ತು, ಅವರು ಸವಾಲನ್ನು ಎದುರಿಸಿ, ಬೆಳ್ತಂಗಡಿ ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿಗೆ ಅಧಿಕಾರ ಇರಲಿಲ್ಲ ಎಂಬ ದುಃಖವನ್ನು ನೀಗಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳನ್ನು ನಿಲ್ಲಿಸಿ, ಅಹೋರಾತ್ರಿ ಪರಿಶ್ರಮದಿಂದ ಗೆಲ್ಲಿಸಿದ್ದಾರೆ. ಮೂಡಬಿದಿರೆಯಲ್ಲೂ ಅಧಿಕಾರ ಲಭಿಸಿದೆ. ಅದರಲ್ಲೂ ಅತೀ ಹೆಚ್ಚು ಸದಸ್ಯರನ್ನು ಬೆಳ್ತಂಗಡಿಯಲ್ಲಿ ಪಡೆದಿರುವುದು ಸಂತಸದ ವಿಚಾರ. ಅದಕ್ಕಾಗಿ ಶಾಸಕರಿಗೆ ವಿಶೇಷ ಅಭಿನಂದನೆಗಳು, ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮವಾದ ಆಡಳಿತವನ್ನು ಕೊಡುತ್ತೇವೆ ಎಂದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಇತಿಹಾಸದಲ್ಲಿ ಬಿ.ಜೆ.ಪಿ. ಸ್ವತಂತ್ರವಾಗಿ ನ.ಪಂ. ಅಧ್ಯಕ್ಷ ಸ್ಥಾನ ಲಭಿಸಿದೆ. ಎರಡು ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ಅಧಿಕಾರಿಗಳ ಜೊತೆಗೂಡಿ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಲಾಗಿತ್ತು. ಇದೀಗ ಅಧಿಕಾರ ಲಭಿಸಿದೆ, ಹಲವಾರು ಯೋಜನೆಗಳನ್ನು ರೂಪಿಸಿ ಪಟ್ಟಣ ಇನ್ನಷ್ಟು ಅಭಿವೃದ್ಧಿ ಹೊಂದಲು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಶ್ರಮಿಸಲಿದ್ದಾರೆ. ಅದೇ ರೀತಿ ಪಟ್ಟಣದ ಜನತೆಯ ಸಮಸ್ಯೆಗಳಿಗೂ ಸೂಕ್ತ ಹಾಗೂ ಸಕಾಲದಲ್ಲಿ ಸ್ಪಂದಿಸುವ ಮೂಲಕ ಜನಪರ ಆಡಳಿತ ತಾಲೂಕಿನಲ್ಲಿ ನೀಡಲಾಗುವುದು ಎಂದರು.


ನೂತನ ಅಧ್ಯಕ್ಷರಾದ ರಜನಿ ಕುಡ್ವ ‘ಪ್ರಜಾಪ್ರಕಾಶ’ ಜೊತೆ ಮಾತನಾಡಿ, ಪಟ್ಟಣ ಪಂಚಾಯತ್‍ನ ಎಲ್ಲರೂ ಜೊತೆಗೂಡಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವೆವು. ಶಾಸಕರು ಹಾಗೂ ಸಂಸದರ ಮಾರ್ಗದರ್ಶನದಲ್ಲಿ ಪಟ್ಟಣದ ಸೌಂದರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಜನರ ಸಮಸ್ಯೆಗಳಿಗೂ ಸ್ಪಂದಿಸಿ, ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಜಯಾನಂದ್ ‘ಪ್ರಜಾಪ್ರಕಾಶ’ ಜೊತೆ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆಯಿದ್ದು, ಇದನ್ನು ವ್ಯವಸ್ಥಿತವಾಗಿ ಪರಿಹರಿಸಿ, ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುವುದು. ಸಂತೆಕಟ್ಟೆ ಬಳಿ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗುವುದು, ಜನತೆ ನಮ್ಮ ಮೇಲೆ ಭರವಸೆಯಿಂದ ಆಯ್ಕೆ ಮಾಡಿದ್ದು, ಅವರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಬೆಳ್ತಂಗಡಿ ನಗರದಲ್ಲಿ ಬಿಜೆಪಿಯ ವಿಜಯ ಯಾತ್ರೆ ನಡೆಯಿತು.
ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉಪಾಧ್ಯಕ್ಷ ಸೀತಾರಾಮ್ ಬೆಳಾಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಕಾರ್ಯದರ್ಶಿ ಪ್ರಶಾಂತ್ ಎಂ., ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ., ಸದಸ್ಯ ಜಾಯಲ್ ಮೆಂಡೋನ್ಸಾ, ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಬೆಳಾಲು, ಕಾರ್ಯದರ್ಶಿ ಉಮೇಶ್ ಕುಲಾಲ್, ಮುಖಂಡರುಗಳಾದ ರತ್ನವರ್ಮ ಜೈನ್, ಸದಾನಂದ ಪೂಜಾರಿ ಉಂಗಿಲಬೈಲು, ರಾಜೇಶ್ ಪೈ, ನಂದಕುಮಾರ್,
ಈಶ್ವರ ಭೈರ, ಸುನಿಲ್ ಸಾಲ್ಯಾನ್, ನರಸಿಂಹ ಶೆಟ್ಟಿ, ರಾಜೇಶ್ ಪೆಂರ್ಬುಡ, ಕಿರಣ್ ಕುಮಾರ್, ವೀಣಾ ವಿನೋದ್, ಯತೀಶ್ ಶೆಟ್ಟಿ, ಪ್ರಮೋದ್ ನಾಯಕ್, ಕೇಶವ, ಪ.ಪಂ. ಸದಸ್ಯರಾದ ಲೋಕೇಶ್, ಅಂಬರೀಶ್, ಶರತ್ ಕುಮಾರ್, ತುಳಸಿ, ಗೌರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!