ವಿಜಯ ಕ್ರೆಡಿಟ್ ಸೊಸೈಟಿಗೆ 21ನೇ ವರ್ಷದ ಸಂಭ್ರಮ: ₹5.05 ಕೋಟಿಗೂ ಅಧಿಕ ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ:

 

 

ಬೆಳ್ತಂಗಡಿ, : ಇಪ್ಪತ್ತೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಒಟ್ಟು ₹654.95 ಕೋಟಿ ವ್ಯವಹಾರ ನಡೆಸಿರುವ ಸೊಸೈಟಿ, ₹5.05 ಕೋಟಿಗೂ ಅಧಿಕ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.18ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ತಿಳಿಸಿದರು.

ಗುರುವಾಯನ ಕೆರೆಯಲ್ಲಿರುವ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಪ್ರಗತಿ ಹಾಗೂ ಆರ್ಥಿಕ ಸಾಧನೆಗಳ ವಿವರ ನೀಡಿದರು. ಪ್ರಸ್ತುತ ಸೊಸೈಟಿಯು 36 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಸದಸ್ಯರ ವಿಶ್ವಾಸ ಮತ್ತು ಸಹಕಾರದಿಂದ ಸಂಸ್ಥೆ ನಿರಂತರವಾಗಿ ಬೆಳೆಯುತ್ತಿದೆ ಎಂದರು.

ವರದಿ ಸಾಲಿನಲ್ಲಿ ಸೊಸೈಟಿಯ ಪಾಲು ಬಂಡವಾಳ ₹4.22 ಕೋಟಿ ಇದ್ದು, ₹367 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಠೇವಣಿ ಪ್ರಮಾಣದಲ್ಲಿ ಶೇ.48.11ರಷ್ಟು ಹಾಗೂ ಹೊರಬಾಕಿ ಸಾಲದಲ್ಲಿ ಶೇ.33.28ರಷ್ಟು ವೃದ್ಧಿ ದಾಖಲಾಗಿದೆ. ಹಣಕಾಸು ಕ್ಷೇತ್ರದಲ್ಲಿ ಸೊಸೈಟಿಯು ಉತ್ತಮ ಕಾರ್ಯನಿರ್ವಹಣೆಯನ್ನು ಕಾಯ್ದುಕೊಂಡಿರುವುದಕ್ಕೆ ಈ ಅಂಕಿ-ಅಂಶಗಳು ಸಾಕ್ಷಿಯಾಗಿವೆ ಎಂದು ಅಜಿತ್ ಜಿ. ಶೆಟ್ಟಿ ಹೇಳಿದರು.

ಪ್ರಶಸ್ತಿಗಳ ಗರಿ

ಸೊಸೈಟಿಯ ಸಾಧನೆಗೆ ವಿವಿಧ ಗೌರವಗಳು ಸಂದಿವೆ. 2024ನೇ ಸಾಲಿನ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ಸಾಧನಾ ಪ್ರಶಸ್ತಿಯನ್ನೂ ಸೊಸೈಟಿ ಪಡೆದುಕೊಂಡಿದೆ ಎಂದು ಅಧ್ಯಕ್ಷರು ತಿಳಿಸಿದರು.

ಶಾಖೆಗಳ ವಿಸ್ತರಣೆ

ಸದಸ್ಯರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ಸೊಸೈಟಿಯ ಶಾಖಾ ಜಾಲವನ್ನು ವಿಸ್ತರಿಸಲಾಗುತ್ತಿದೆ. ಧರ್ಮಸ್ಥಳ ಮತ್ತು ವಾಮಂಜೂರಿನಲ್ಲಿ ನೂತನ ಶಾಖೆಗಳನ್ನು ಆರಂಭಿಸಲಾಗಿದೆ. ದೇರಳಕಟ್ಟೆ, ಮೂಡಬಿದಿರೆ ಹಾಗೂ ಉರ್ವಾ ಮಾರ್ಕೆಟ್ ಶಾಖೆಗಳನ್ನು ನೂತನ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಸೊಸೈಟಿಯ ಉತ್ತಮ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಸಿದ್ದಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸುವಂತೆ ಬೇಡಿಕೆಗಳು ಬರುತ್ತಿವೆ ಎಂದು ಅಜಿತ್ ಜಿ. ಶೆಟ್ಟಿ ಹೇಳಿದರು.

ಮಡಂತ್ಯಾರು ಶಾಖೆಗೆ ಪ್ರಥಮ ಸ್ಥಾನ

ಠೇವಣಿ ಗುರಿ ಸಾಧನೆ ಹಾಗೂ ಉತ್ತಮ ಕಾರ್ಯನಿರ್ವಹಣೆಯಲ್ಲಿ ಸೊಸೈಟಿಯ ವಿವಿಧ ಶಾಖೆಗಳ ನಡುವೆ ನಡೆದ ಮೌಲ್ಯಮಾಪನದಲ್ಲಿ ಮಡಂತ್ಯಾರು ಶಾಖೆ ಪ್ರಥಮ, ಉರ್ವಾ ಶಾಖೆ ದ್ವಿತೀಯ ಹಾಗೂ ಉಜಿರೆ ಶಾಖೆ ತೃತೀಯ ಸ್ಥಾನ ಪಡೆದುಕೊಂಡವು.

 

 

 

ಮಹಾಸಭೆಯಲ್ಲಿ ನಿರ್ದೇಶಕರಾದ ಎಸ್. ಜಯರಾಮ ಶೆಟ್ಟಿ, ಬಿ. ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಎಚ್., ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಜಯರಾಮ ಭಂಡಾರಿ ಎಂ., ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ, ಜಯರಾಮ ಶೆಟ್ಟಿ, ಸಾರಿಕಾ ಶೆಟ್ಟಿ ಹಾಗೂ ವಿಜಯಾ ಬಿ. ಶೆಟ್ಟಿ ಉಪಸ್ಥಿತರಿದ್ದರು. ಖಾಯಂ ಆಹ್ವಾನಿತರಾದ ಪ್ರಕಾಶ್ ಶೆಟ್ಟಿ ನೊಚ್ಚ ಕೂಡ ಭಾಗವಹಿಸಿದ್ದರು.

ಉಪಾಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿದರು. ಸಿಇಒ ಸುಜಯ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪುಷ್ಪರಾಜ್ ಶೆಟ್ಟಿ ವಂದಿಸಿದರು.

ಸಂಸ್ಥೆಯ ಆರ್ಥಿಕ ಬೆಳವಣಿಗೆ, ಸದಸ್ಯರ ಸಂಖ್ಯೆ ಮತ್ತು ಠೇವಣಿ-ಸಾಲ ವಹಿವಾಟಿನ ಹೆಚ್ಚಳದೊಂದಿಗೆ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಬಲಿಷ್ಠ ಕಾರ್ಯನಿರ್ವಹಣೆಯನ್ನು ಪ್ರತಿಬಿಂಬಿಸಿದೆ.

error: Content is protected !!