ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಭಕ್ತಿ ಜಾಥಾ: 65 ಯುವಕರಿಂದ 36 ವರ್ಷದ ಪರಂಪರೆಗೆ ಜೀವಂತಿಕೆ

 

 

ಧರ್ಮಸ್ಥಳ, ಆ. 22: ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಮಂದಿ ಯುವಕರು ಸುಮಾರು 380 ಕಿಲೋಮೀಟರ್ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಮೂಲಕ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಅಪೂರ್ವ ಸಂದೇಶ ಸಾರಿದರು.

ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತ ಯುವಕರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯದರ್ಶಿ ಎ.ವಿ. ಶೆಟ್ಟಿ ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರು.

36 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸೈಕಲ್ ಭಕ್ತಿ ಜಾಥಾವನ್ನು ಯುವಕರ ಹಿರಿಯರು ಆರಂಭಿಸಿದ್ದರು. ಇದೀಗ ಅದೇ ಪರಂಪರೆಯನ್ನು ಇಂದಿನ ಯುವಕರು ಶ್ರದ್ಧೆ, ಭಕ್ತಿ ಹಾಗೂ ಸಮರ್ಪಣಾ ಮನೋಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ನೂರಾರು ಗ್ರಾಮಗಳ ಮೂಲಕ ಸಾಗುವ ಈ ಜಾಥಾ ಆರೋಗ್ಯಕರ ಜೀವನಶೈಲಿ ಹಾಗೂ ಸದಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

“ಯುವಕರು ಆರೋಗ್ಯವಂತರಾಗಿರಬೇಕು, ದುಶ್ಚಟಗಳಿಂದ ದೂರವಿರಬೇಕು ಹಾಗೂ ಶಿಸ್ತು ಮತ್ತು ಭಕ್ತಿಯ ಜೀವನ ನಡೆಸಬೇಕು” ಎಂಬ ಉದಾತ್ತ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದೇ ಜಾಥಾದ ಪ್ರಮುಖ ಉದ್ದೇಶವಾಗಿದೆ.

ಧರ್ಮಸ್ಥಳಕ್ಕೆ ಆಗಮಿಸಿದ ಯುವಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಕ್ತಿಯ ಅನುಭವವನ್ನು ಮನದಲ್ಲಿ ತುಂಬಿಕೊಂಡು ತಮ್ಮ ಊರಿನತ್ತ ಮರಳಲಿದ್ದಾರೆ.

ಈ ಸೈಕಲ್ ಜಾಥಾ ಕೇವಲ ಕ್ರೀಡಾ ಚಟುವಟಿಕೆಯಲ್ಲ. ಯುವಶಕ್ತಿ, ಭಕ್ತಿ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಒಂದೇ ಸೂತ್ರದಲ್ಲಿ ಬೆಸೆಯುವ ಆದರ್ಶ ಪರಂಪರೆಯಾಗಿ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!