ಬೆಳ್ತಂಗಡಿ : ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ಬಂದು ಮನೆಯ ಶೆಡ್ ನಲ್ಲಿ ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ದಾಳಿ ಮಾಡಿ ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಎಂಬವರ ಮನೆಯಲ್ಲಿ ಶೆಡ್ ನಲ್ಲಿ ಅಕ್ರಮವಾಗಿ ಕೋವಿಯಿಂದ ಕಾಡು ಪ್ರಾಣಿ ಬೇಟೆಯಾಡಿ ತಂದು ಮಾಂಸ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿಕೊಂಡು ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 12 ರಂದು ರಾತ್ರಿ ದಾಳಿ ಮಾಡಿ ಜುಲೈ 13 ರಂದು ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ದಾಳಿ ವೇಳೆ ಬೇಟೆಯಾಡಿ ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ನಿವಾಸಿ ಶರತ್ ಎಂಬಾತನಿಗೆ ಸೇರಿದ ಕಾರು , ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರೇಜ್, ಕತ್ತಿ ಸೇರಿದಂತೆ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಅರಣ್ಯಾಧಿಕಾರಿಗಳು ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ಜುಲೈ 13 ರಂದು ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಲಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್.ಟಿ.ಎನ್ , ಡಿ.ಆರ್.ಎಫ್.ಒ ಸಂದೀಪ್,ರಾಘವೇಂದ್ರ,ಕಿರಣ್ ಪಾಟೀಲ್ , ಕಮಲ, ಬೀಟ್ ಫಾರೆಸ್ಟರ್ ಪಾರಶುರಾಮ್ ಮೇಟಿ ,ಚಾಲಕ ದಿವಕರ್ ಭಾಗವಹಿಸಿದರು.
ಈ ಕುಖ್ಯಾತ ಕಾಡು ಪ್ರಾಣಿ ಬೇಟೆ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಸುಮಾರು 20 ಮಂದಿಗೂ ಅಧಿಕ ಸದಸ್ಯರು ಹೊಂದಿದ್ದು. ಇವರಲ್ಲಿ ಲೈಸೆನ್ಸ್ ಕೋವಿ ಹಾಗೂ ಅಕ್ರಮ ಕೋವಿ ಹೊಂದಿದವರೆ ಸದಸ್ಯರಾಗಿದ್ದಾರೆ. ಇವರು ಕಳೆದ ಕೆಲ ವರ್ಷಗಳಿಂದ ಅಕ್ರಮ ಬೇಟೆಯಲ್ಲಿ ನಿರತರಾಗಿದ್ದರು. ಈ ಒಂದು ತಿಂಗಳಲ್ಲಿ 30 ಕಾಡುಪ್ರಾಣಿ ಬೇಟೆಯಾಡಿದ್ದಾರೆ ಎಂದು ಈ ಬೇಟೆಗಾರರ ಸದಸ್ಯರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ತಂಡದ ಸದಸ್ಯರು ರಾತ್ರಿಗಿಂತ ಹಗಲು ಹೊತ್ತು ಹೆಚ್ಚಾಗಿ ಬೇಟೆಯಲ್ಲಿ ನಿರತರಾಗುತ್ತಿದ್ದರು. ಯಾವ ಕಡೆ ಕಾಡಿನಲ್ಲಿ ಹೋಗಿ ಕಾಡು ಪ್ರಾಣಿ ಬೇಟೆಯಾಡಿದ್ರೂ ಗೇರುಕಟ್ಟೆ ಇದೆ ಜೋಸ್ಸಿ ಅಲ್ವಿನ್ ಲೋಬೋ ಮನೆಯ ಶೆಡ್ ನಲ್ಲಿ ಮಾಂಸ ಮಾಡಿ ಬೇಕಾದವರಿಗೆ ಹಣಕ್ಕಾಗಿ ವಿತರಿಸುತ್ತಿದ್ದರು ಎನ್ನಲಾಗಿದೆ.