ಬೆಳ್ತಂಗಡಿ : ಬಯಲು ಆಲಯ ಗಣಪತಿ ಎಂದೇ ಪ್ರಸಿದ್ಧಿ ಪಡೆದಿರುವ ಮುಜರಾಯಿ ಇಲಾಖೆಯ ಅಧೀನದಲ್ಲಿ ಇರುವ ಪ್ರಸಿದ್ಧ ಪುಣ್ಯ ಕ್ಷೇತ್ರ ದಿನಂಪ್ರತಿ ಸಹಸ್ರಾರು ಮಂದಿ ಭಕ್ತರು ಆಗಮಿಸುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬ ದೇವಳಕ್ಕೆ ವಂಚಿಸುವ ಮೂಲಕ ಅಪರಾಧ ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿರುವ ಬಗ್ಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಶಬರಾಯ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS), 2023 (U/s-316(5),62) ಅಡಿಯಲ್ಲಿ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಗಣೇಶ್ ನಾಯ್ಕ ವಿರುದ್ಧ ಜೂ.26 ರಂದು ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆ.ಸುಬ್ರಮಣ್ಯ ಶಬರಾಯರಾಗಿ ಕಾರ್ಯನಿರ್ವಹಿಸುತ್ತಿದ್ದು. ಜೂ.20 ರಂದು ಬೆಳಿಗ್ಗೆ 10 ಗಂಟೆಯಿಂದ ದೇವಸ್ಥಾನದ ಸಮಿತಿಯ ಸದಸ್ಯರ ಸಮಕ್ಷಮ ದೇವಾಲಯದ ಕಾರ್ಯನಿರ್ವಹಣಾಧಿಕಾರಿ, ಕೆನರಾ ಬ್ಯಾಂಕ್ ಕೊಕ್ಕಡ ಶಾಖೆಯ ಸಿಬ್ಬಂದಿ ಮಾಥ್ಯೂ ಮತ್ತು ಗಣೇಶ ನಾಯ್ಕ ಹಾಗೂ ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖಾ ವತಿಯಿಂದ ಜಿಲ್ಲಾಧಿಕಾರಿಯವರ ಕಛೇರಿಯಿಂದ ನಿಯೋಜಿತರಾದ ಸಿಬ್ಬಂದಿ ಹಾಗೂ ದೇವಸ್ಥಾನದ ಸಮಿತಿಯಿಂದ ಕರೆಸಲ್ಪಟ್ಟ ಸುಮಾರು 42 ಜನ ಸ್ವಯಂ ಸೇವಕರು ಹಾಗೂ ಶ್ರೀ ದೇವಳದ 20ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರೊಂದಿಗೆ ದೇವಳದ ಹುಂಡಿ ಎಣಿಕೆ ಕಾರ್ಯ ನಡೆದಿರುತ್ತದೆ. ಹುಂಡಿ ಕಾಣಿಕೆ ಎಣಿಕೆಯ ಸಂದರ್ಭದಲ್ಲಿ ಆಲ್ಲಿ ಸೇರಿದ ಎಲ್ಲರೂ ರೂ 500, 200, 100, 50, 20 ಮತ್ತು 10 ರ ನೋಟುಗಳನ್ನು ವರ್ಗಾವರು ವಿಂಗಡ ಮಾಡಿ ಜೋಡಿಸಿ ಇಡುವ ಕೆಲಸ ಮಾಡಿದ್ದು. ಆ ಸಮಯ ಆರೋಪಿ ಗಣೇಶ್ ನಾಯ್ಕ ಎಂಬಾತನು ಹುಂಡಿ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಕೆಲವೊಂದು ನೋಟುಗಳನ್ನು ಬಂಡಲ್ ಗೆ ಹೆಚ್ಚು ಸೇರಿಸುತ್ತಿರುವ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ದೇವಾಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಲೆಕ್ಕ ಮಾಡಿ ಪ್ಯಾಕ್ ಮಾಡಿಟ್ಟ ಹಣದ ಒಂದು ಬಂಡಲ್ ನ್ನು ತೆಗದು ಎಣಿಸಿದಾಗ ಅದರಲ್ಲಿ ಹೆಚ್ಚುವರಿ ನೋಟುಗಳು ಇದ್ದು. ಬಳಿಕ ಲೆಕ್ಕ ಮಾಡಿ ಇಟ್ಟ ಎಲ್ಲ ಹಣದ ಬಂಡಲ್ ಗಳನ್ನು ತೆಗೆದು ಎಣಿಸಿದಾಗ ಒಟ್ಟು 40 ಸಾವಿರ ರೂಪಾಯಿ ಹೆಚ್ಚುವರಿ ಹಣ ಇದು ಆರೋಪಿ ಗಣೇಶ್ ನಾಯ್ಕನು ದೇವಳಕ್ಕೆ ವಂಚಿಸುವ ಮೂಲಕ ಅಪರಾಧ ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿರುವುದು ಕಂಡು ಬರುತ್ತದೆ ಎಂದು ದೂರು ನೀಡಿದ್ದಾರೆ.