ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಎಡೆ ಬಿಡದೆ ಸತತವಾಗಿ ಭಾರೀ ಮಳೆಯಾಗುತಿದ್ದು, ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ. ನೇತ್ರಾವತಿ, ಮೃತ್ಯುಂಜಯ, ಸೋಮವತಿ, ಕಪಿಲ, ಪಲ್ಗುಣಿ,ಸೇರಿದಂತೆ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಮುಂಡಾಜೆ ಮತ್ತು ಕಲ್ಮಂಜ ಗ್ರಾಮದಲ್ಲಿ ಹರಿಯುವ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿರುವ ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕಾರ್ಯ ಪೂರ್ಣಗೊಳ್ಳದ ಕಾರಣ ಮುಂಡಾಜೆ ಮತ್ತು ಕಲ್ಮಂಜ ಗ್ರಾಮಗಳಲ್ಲಿ ಭಾನುವಾರ ಪ್ರವಾಹ ಭೀತಿ ಉಂಟಾಯಿತು.
ಭಾನುವಾರ ಭಾರಿ ಮಳೆ ಸುರಿದಿದ್ದು ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ತುಂಬಿ ಹರಿದವು. ಇಲ್ಲಿನ ಆನಂಗಳ್ಳಿ, ಪಜಿರಡ್ಕ, ಕಾಪು ಮೊದಲಾದ ಕಡೆ ಇರುವ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಲಾಗಿಲ್ಲ.ಪಜಿರಡ್ಕ ಕಿಂಡಿ ಅಣೆಕಟ್ಟು ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಸಂಗಮ ಸ್ಥಳದಲ್ಲಿದೆ. ಅಣೆಕಟ್ಟಿನಲ್ಲಿ ಹಲಗೆ ಇದ್ದ ಕಾರಣ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ ಎರಡು ನದಿಗಳ ಸುಮಾರು 5 ಕಿಮೀ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಉಂಟಾಯಿತು. ಇದರ ಜತೆ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾದ ತ್ಯಾಜ್ಯ ಮರಮಟ್ಟು ಇನ್ನಷ್ಟು ನೀರು ಏರಿಕೆಗೆ ಕಾರಣವಾಯಿತು. ಕೆಲವು ಕಡೆ ತೋಟಗಳಿಗೆ ನದಿ ನೀರು ನುಗ್ಗಿ ಪ್ರವಾಹ ಭೀತಿ ಎದುರಾಯಿತು.
ಈ ಎರಡು ನದಿ ಪಾತ್ರಗಳ ಸಮೀಪ ಹಲವು ಮನೆಗಳಿದ್ದು ಮನೆ ಮಂದಿಯಲ್ಲಿ ಭೀತಿ ಎದುರಾಗಿದೆ.
2019ರ ಪ್ರವಾಹದ ಬಳಿಕ ಈ ನದಿಗಳಲ್ಲಿ ಸಾಮಾನ್ಯ ಪ್ರವಾಹ ಕಂಡು ಬಂದರೂ ಜನರಲ್ಲಿ ಭಯದ ವಾತಾವರಣ ಉಂಟಾಗುತ್ತದೆ.
ಮಳೆಗಾಲ ಆರಂಭಕ್ಕೆ ಮೊದಲೇ ಈ ರೀತಿಯಾಗಿ ನದಿಯಲ್ಲಿ ನೀರು ಹರಿದು ಬಂದಿದ್ದು ಇದೇ ಮೊದಲು.ಕಳೆದ ವರ್ಷ ಈ ಸಮಯ ಎರಡು ನದಿಗಳು ಸಂಪೂರ್ಣ ಬತ್ತಿ ನೀರಿಗೆ ಪರದಾಟ ಉಂಟಾಗಿದ್ದು ಜೂನ್ ಮೂರನೇ ವಾರದ ಬಳಿಕ ನದಿಗಳಲ್ಲಿ ಹರಿವು ಕಂಡುಬಂದಿತ್ತು. ಆದರೆ ಈ ಬಾರಿ ನದಿಯಲ್ಲಿ ಮೇ ತಿಂಗಳಲ್ಲೇ ಪ್ರವಾಹ ಹರಿದು ಬಂದಿದೆ ಎಂದು ಮುಂಡಾಜೆಯ ನಿವಾಸಿಯೊಬ್ಬರು ತಿಳಿಸಿದ್ದಾರೆ
ಕಿಂಡಿ ಅಣೆಕಟ್ಟುಗಳ ಪರಿಸರದಲ್ಲಿ ಕೆಲವೆಡೆ ಅವುಗಳ ಮೇಲ್ಭಾಗದಿಂದ ಹಲವು ಅಡಿ ನೀರು ಹರಿಯುತ್ತಿದ್ದು ಹಲಗೆ ತೆರವುಗೊಳಿಸುವುದು ಸಾಹಸದ ಕೆಲಸವಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಲಾಗುತ್ತದೆ. ಆದರೆ ಈ ಬಾರಿ ನದಿಗಳು ತುಂಬಿ ಹರಿದದ್ದು ಹಲಗೆ ತೆರವಿಗೆ ಅಡ್ಡಿಯಾಗಿದೆ.
ಫಲ್ಗುಣಿ ನದಿಯ ಪಡಂಗಡಿಯ ಹಚ್ಚಾಡಿಯಿಂದ ಬಳಂಜಕ್ಕೆ ಹೋಗುವ ಕಿರು ಸೇತುವೆಯಲ್ಲಿ ಸಾಕಷ್ಟು ಪ್ರಮಾಣದ ತ್ಯಾಜ್ಯ,ಮರುಮಟ್ಟು ಸಂಗ್ರಹವಾಗಿದ್ದು ಸಂಪರ್ಕ ಭೀತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಯಿತು.ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಟ ನಡೆಸಿದರು.ಚರಂಡಿಗಳು ಸಮರ್ಪಕವಾಗಿ ನಿರ್ಮಾಣವಾಗದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಮೀಪದ ಮನೆಗಳ ಕಡೆಗೂ ನೀರು ಹರಿದು ಬಂತು. ಮದ್ದಡ್ಕದಿಂದ ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಎಂಬಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಅಳವಡಿಸಲಾದ ಮೋರಿಯ ಭಾಗದಲ್ಲಿ ಕುಸಿತ ಉಂಟಾಗಿ ಮತ್ತೆ ಸಂಪರ್ಕ ಕಡಿತ ಭೀತಿ ಎದುರಾಗಿದೆ.
. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮೇ 28 ರವರೆಗೆ ಭಾರೀ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದೆ. ಅದಲ್ಲದೇ ಈ ಬಾರಿ ಮುಂಗಾರೂ ಕೂಡ ಬೇಗ ಪ್ರಾರಂಭವಾಗಿದ್ದು ಮತ್ತಷ್ಟು ಮಳೆಯಾಗುವ ಲಕ್ಷಣ ಕಂಡು ಬರುತ್ತಿದೆ.ತಾಲೂಕಿನ ಹಲವೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡುತಿದ್ದಾರೆ.