ಬೆಳ್ತಂಗಡಿ:ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಅಪರ ಸರ್ಕಾರಿ ವಕೀಲರ ಕಛೇರಿ ಉದ್ಘಾಟನೆ ಮತ್ತು ವಕೀಲರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ರವರು ಬೆಳ್ತಂಗಡಿಯ 60 ವರ್ಷ ಹಳೆಯದಾದ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಿ ಸರ್ಕಾರದ ಮಟ್ಟದಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾತಿಗೆ ಬಜೆಟ್ ನಲ್ಲಿ ಅನುದಾನ ನೀಡಲು ಒತ್ತಡ ತರುವ ಬಗ್ಗೆ ವಕೀಲರ ನಿಯೋಗವನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.
ಅದರಂತೆ ಮಾರ್ಚ್ 06 ರಂದು ಬೆಂಗಳೂರಿನ ಬಜೆಟ್ ಅಧಿವೇಶನದ ಸಂಧರ್ಭ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ನೇತೃತ್ವದಲ್ಲಿ ಕಾನೂನು ಸಚಿವ ಎಚ್. ಕೆ ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ವಕೀಲರ ಮನವಿಗೆ ಸ್ಪಂದಿಸಿದ ಕಾನೂನು ಸಚಿವರು ಅನುದಾನದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್, ಬಿ ಕೆ, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್ ಲೋಬೋ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಎ ಮತ್ತು ಮಾಜಿ ಅಧ್ಯಕ್ಷ ಶಿವ ಕುಮಾರ್ ಎಸ್.ಎಂ ಜೊತೆಗಿದ್ದರು.