ಕೇರಳ: 23 ವರ್ಷದ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣದ ಕಾರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಕೇರಳ ಮಾತ್ರವಲ್ಲದೆ ಇಡೀ ದೇಶದಲ್ಲಿ ಭಾರಿ ಸುದ್ದಿಯಾದ ಈ ಪ್ರಕರಣದಲ್ಲಿ ಆರೋಪಿ ತನ್ನ ಪ್ರೇಯಸಿ ಸೇರಿದಂತೆ ತನ್ನ ಕುಟುಂಬದ ಐವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಈ ಕೊಲೆಗೆ ಸಾಲವೇ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಸಾಮೂಹಿಕ ಆತ್ಮಹತ್ಯೆ, ಸಾಮೂಹಿಕ ಹತ್ಯೆಗೆ ತಿರುಗಿದ್ದು ಈ ಪ್ರಕರಣದ ಇನ್ನೊಂದು ತಿರುವು.
ಹೌದು, ಕೇರಳದ ವೆಂಜರಮೂಡಿನಲ್ಲಿ ಆರೋಪಿ ಅಫಾನ್ ತನ್ನ 13 ವರ್ಷದ ಸಹೋದರ ಅಹಸನ್, ಅಜ್ಜಿ ಸಲ್ಮಾ ಬೀವಿ, ತಂದೆಯ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಅವನ ಗೆಳತಿ ಫರ್ಶಾನಾ ಅವರನ್ನು ಹತ್ಯೆಗೈದಿದ್ದಾನೆ. ಆರೋಪಿ ಅಫಾನ್ ಅವರ ತಾಯಿ ಗಂಭೀರ ಸ್ಥಿತಿಯಲ್ಲಿದ್ದು, ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹತ್ಯಾಕಾಂಡಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಆರೋಪಿ ಅಫಾನ್ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿತ್ತು. ಅಫಾನ್ ಅವರ ತಂದೆಯ ವಿದೇಶಿ ಸಾಲಗಳ ಜೊತೆಗೆ, ಅವರ ಕುಟುಂಬವು 65 ಲಕ್ಷ ರೂ. ಸಾಲವನ್ನು ಹೊಂದಿದೆ. ಅನೇಕ ಮಂದಿಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿತ್ತು. ಆದರೆ, ತಾವು ಪಡೆದ ಸಾಲವನ್ನು ಮರುಪಾವತಿಸಲು ಅವರಿಂದ ಸಾಧ್ಯವಾಗಲಿಲ್ಲ. ಜೀವನ ನಡೆಸಲೆಂದೇ ಅಫಾನ್ ಕುಟುಂಬ ಹಣವನ್ನು ಸಾಲವಾಗಿ ಪಡೆಯುತ್ತಿತ್ತು. ಯಾರಾದರೂ ಸಾಲದ ಹಣವನ್ನು ವಾಪಸ್ ಕೇಳಿದಾಗ, ಮತ್ತೊಬ್ಬರಿಂದ ಸಾಲು ಪಡೆದು ಅವರಿಗೆ ಹಿಂತಿರುಗಿಸುತ್ತಿದ್ದರು. ಸಾಲದ ಮೇಲೆ ಸಾಲ ಮಾಡುತ್ತಿದ್ದರಿಂದ ಸಾಲದ ಮೊತ್ತ ಬೆಟ್ಟದಷ್ಟು ಬೆಳೆಯಿತು. ಇದರಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದರು. ಅಲ್ಲದೆ, ಅಫಾನ್ ಕುಟುಂಬದ ಬಗ್ಗೆ ಗೊತ್ತಾದಾಗ ಜನರು ಸಾಲ ಕೊಡುವುದನ್ನು ಕೂಡ ನಿಲ್ಲಿಸಿದರು.
ಅಫ್ಫಾನ್ ತಂದೆ ರಹೀಮ್, ಸೌದಿ ಅರೇಬಿಯಾದಲ್ಲಿ ವ್ಯವಹಾರ ನಡೆಸುತ್ತಿದ್ದಾಗಲೇ ಭಾರಿ ಸಾಲದಲ್ಲಿದ್ದರು. ಅವರು ಕೂಡ ಏಳು ತಿಂಗಳಿಗಿಂತ ಹೆಚ್ಚು ಕಾಲ ಕುಟುಂಬಕ್ಕೆ ಹಣವನ್ನು ಕಳುಹಿಸಿರಲಿಲ್ಲ. ಅಲ್ಲದೆ, ತನ್ನ ಮನೆಯನ್ನು ಮಾರಿ ಹಣವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸುವಂತೆ ಕೇಳಿಕೊಂಡಿದ್ದ. ಈ ಬಗ್ಗೆ ಕುಟುಂಬದಲ್ಲಿ ಜಗಳಗಳು ಸಹ ನಡೆಯುತ್ತಿದ್ದವು. ಇತ್ತ ಅಫಾನ್ ಅವರ ತಾಯಿ ಶಮಿ ಕೂಡ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕಿತ್ಸೆಗೂ ಕೂಡ ಹಣವಿರಲಿಲ್ಲ.
ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಾಗ ಇಡೀ ಕುಟುಂಬ ಆರಂಭದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಯೋಜಿಸಿತ್ತು. ಒಂದು ವೇಳೆ ಎಲ್ಲರೂ ಸಾಯದಿದ್ದರೆ ಏನು ಮಾಡುವುದು ಎಂಬ ಆ ಕ್ಷಣದ ಆಲೋಚನೆಯೇ ಸಾಮೂಹಿಕ ಹತ್ಯಗೆ ಕಾರಣವಾಯಿತು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ ಅಫಾನ್ನಿಂದ ಮೊದಲು ದಾಳಿಗೆ ಒಳಗಾದ ವ್ಯಕ್ತಿ ಅವರ ತಾಯಿ ಉಮ್ಮಾ ಶೆಮಿ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಉಮ್ಮಾ ಶೆಮಿಯ ಕುತ್ತಿಗೆಗೆ ಶಾಲುವಿನಿಂದ ಬಿಗಿದು ಕೊಲ್ಲಲು ಅಫಾನ್ ಪ್ರಯತ್ನಿಸಿದನು. ಆಕೆ ಪ್ರಜ್ಞೆ ತಪ್ಪಿದಾಗ, ಅವಳು ಸತ್ತಿದ್ದಾಳೆಂದು ಭಾವಿಸಿ ಕೋಣೆಯಲ್ಲಿ ಬೀಗ ಹಾಕಿ ಹೊರಗೆ ಹೋದನು. ನಂತರ, ಇತರರನ್ನು ಕೊಲ್ಲಲು ಆಯುಧವನ್ನು ಸಿದ್ಧಪಡಿಸಲು ಮುಂದಾದನು. ಇದಕ್ಕಾಗಿ, ಆತ ವೆಂಜರಮೂಡಿನಲ್ಲಿರುವ ಹಣಕಾಸು ಸಂಸ್ಥೆಗೆ ಹೋಗಿ 1,500 ರೂ. ಸಾಲ ಪಡೆದನು. ಬಳಿಕ ಸಮೀಪದ ಅಂಗಡಿಗೆ ಹೋಗಿ ಭಾರವಾದ ಸುತ್ತಿಗೆಯನ್ನು ಖರೀದಿಸಿದನು.
ಇದಾದ ನಂತರ, ಅಫಾನ್ ಬೇರೆ ಅಂಗಡಿಗಳಿಗೆ ಹೋಗಿ ಒಂದು ಚೀಲ ಮತ್ತು ಇಲಿ ಪಾಷಣವನ್ನು ಖರೀದಿಸಿದನು. ಇಷ್ಟೆಲ್ಲ ಮಾಡಿ ಮನೆಗೆ ತಲುಪಿದಾಗ, ಅಫಾನ್ ತನ್ನ ತಾಯಿ ತಲೆ ಎತ್ತಿ ತನ್ನನ್ನು ನೋಡುತ್ತಿರುವುದನ್ನು ನೋಡಿದನು. ತಕ್ಷಣ ತನ್ನ ತಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದನು. ಅವಳು ಸತ್ತಿದ್ದಾಳೆಂದು ಭಾವಿಸಿ ಮನೆಯಿಂದ ಹೊರಗೆ ಹೋದನು. ನಂತರ, ಅವನು ಪಾಂಗೋಡ್ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿ ಅದೇ ಸುತ್ತಿಗೆಯಿಂದ ಅವಳನ್ನು ಕೊಂದನು. ನಂತರ, ತನ್ನ ಅಜ್ಜಿಯ ಚಿನ್ನದ ಹಾರವನ್ನು ತೆಗೆದುಕೊಂಡು ವೆಂಜಾರಮೂಡ್ಗೆ ಹೋಗಿ ಮಾರಿದನು. ಬಳಿಕ ಎಸ್.ಎನ್ ಪುರಂನಲ್ಲಿದ್ದ ತನ್ನ ತಂದೆಯ ಸಹೋದರ ಲತೀಫ್ (69), ಆತನ ಪತ್ನಿ ಶಾಹೀದಾ (59) ಅವರನ್ನು ಕೊಂದಿದ್ದಾನೆ. ಇದಾದ ನಂತರ ಪೆರುಮಾಳದಲ್ಲಿ ತನ್ನ ಸಹೋದರ ಅಫ್ಸಾನ್ (13) ಮತ್ತು ತನ್ನ ಪ್ರೇಯಸಿ ಫರ್ಸಾನಾಳನ್ನು ಅಫಾನ್ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ತಾನು ವಿಷ ಸೇವನೆ ಮಾಡಿರುವುದಾಗಿ ಅಫಾನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ದ. ತಕ್ಷಣ ಆತನನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ದಿನಗಳ ವೀಕ್ಷಣೆಯ ನಂತರ, ಅಫಾನ್ನನ್ನು ಆಸ್ಪತ್ರೆಯಲ್ಲಿ ಬಂಧಿಸಲಾಗುವುದು ಎಂದು ಎಸ್ಪಿ ಕೆ.ಎಸ್. ಸುದರ್ಶನನ್ ತಿಳಿಸಿದ್ದಾರೆ.