ಜೀವಸಂಕುಲದ ನಿರ್ವಹಣೆಗೆ ಆರ್ಥಿಕ ಕೊರತೆ: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯ ಅರಣ್ಯ ಇಲಾಖೆಯ ಸುಪರ್ದಿಗೆ..!?

 

ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದ್ದಾರೆ.

ದೇಶದಲ್ಲಿ ಅತೀ ದೊಡ್ಡ 18 ಮೃಗಾಲಯಗಳಿದ್ದು, ಅದರಲ್ಲಿ ಪಿಲಿಕುಳ ಜೈವಿಕ ಉದ್ಯಾನವನ ಕೂಡ ಒಂದಾಗಿದೆ. ಈ ಉದ್ಯಾನವನ 150 ಎಕರೆ ವ್ಯಾಪ್ತಿಯಲ್ಲಿದ್ದು 1,440 ಪ್ರಾಣಿ ಪಕ್ಷಿಗಳಿವೆ. ಆದರೆ ನಿರ್ವಹಣೆಯೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ದೊಡ್ಡ ಸವಾಲಾಗಿದೆ.
ಪಿಲಿಕುಳ ಮೃಗಾಲಯಕ್ಕೆ ತಿಂಗಳಿಗೆ 30 ಲಕ್ಷದಂತೆ ವರ್ಷಕ್ಕೆ 3.60ಕೋಟಿ ರೂ. ನಿರ್ವಹಣೆ ವೆಚ್ಚವಾಗುತ್ತಿದೆ. ಟಿಕೆಟ್ ಕೌಂಟರ್ ಮೂಲಕ 2.5 ಕೋಟಿಯಿಂದ 3 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಉಳಿದ ಮೊತ್ತವನ್ನು ಸಂಗ್ರಹಿಸುವುದೇ ಸವಾಲಾಗಿದೆ. ಮೃಗಾಲಯದ ಅಭಿವೃದ್ಧಿಗೆ ಈಗಾಗಲೇ ಎಂಆರ್ ಪಿಎಲ್, ಕುದುರೆಮುಖ, ರಿಲಯನ್ಸ್ ಸೇರಿದಂತೆ ನಾನಾ ಕಾರ್ಪೊರೇಟ್ ಕಂಪನಿಗಳು ಸಿಎಸ್ಆರ್ ಅನುದಾನ ನೀಡುವ ಮೂಲಕ ಪ್ರೋತ್ಸಾಹವನ್ನು ನೀಡಿವೆ. ಇದು ಮಾತ್ರವಲ್ಲದೆ ದಾನಿಗಳು, ಸೆಲೆಬ್ರಿಟಿಗಳು ಪ್ರಾಣಿಗಳ ದತ್ತು ತೆಗೆದುಕೊಂಡು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಆದರೂ ಮೃಗಾಲಯವನ್ನು ಪ್ರಸ್ತುತ ಸ್ಥಿತಿಯಲ್ಲಿಯೇ ಮುಂದುವರಿಸುವುದು ಕಷ್ಟವಾಗಿದ್ದು ಇದನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಳ್ಳುವಂತೆ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಅರಣ್ಯ ಇಲಾಖೆಯೂ ಸೂಕ್ತವಾಗಿ ಸ್ಪಂದಿಸಿ ಆದೇಶವನ್ನು ಹೊರಡಿಸಿದೆ.

ಪಿಲಿಕುಳ ನಿಸರ್ಗಧಾಮ ಸಂಸ್ಥೆಯು 2001ರಂದು ಆರಂಭವಾಗಿದ್ದು, ಇದು ಉಪ ಅರಣ್ಯ ಸಂರಕ್ಷಣಾಕಾರಿ ಮಂಗಳೂರು ವಿಭಾಗ ಆಡಳಿತ ವ್ಯಾಪ್ತಿಯಲ್ಲಿತ್ತು. ಕ್ರಮೇಣ ಪಿಲಿಕುಳ ನಿಸರ್ಗಧಾಮ ಟ್ರಸ್ಟ್ನ್ನು ಸಹಕಾರ ಸಂಘಗಳ ಕಾಯ್ದೆಯಡಿ ಸೊಸೈಟಿಯಾಗಿ ನೋಂದಣಿಗೊAಡು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮೃಗಾಲಯದ ಪರವಾನಗಿಯನ್ನು 2022 ಸೆ.27ರಂದು ನಡೆದ ಸೆಂಟ್ರಲ್ ಝೂ ಅಥಾರಿಟಿ ತಾಂತ್ರಿಕ ಸಮಿತಿ ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ನವೀಕರಿಸಿ ಆದೇಶ ಮಾಡಲಾಗಿತ್ತು.
ಪಿಲಿಕುಳ ನಿಸರ್ಗಧಾಮದಲ್ಲಿ ದಿನನಿತ್ಯದ ಪಾಲನೆ ಪೋಷಣೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಕಷ್ಟು ಅನುದಾನದ ಲಭ್ಯತೆ ಇಲ್ಲದೆ ಇರುವುದರಿಂದ ಹಾಗೂ ಮಾನವ-ವನ್ಯಜೀವಿ ಸಂಘರ್ಷವನ್ನು ಸಮರ್ಪಕವಾಗಿ ಪರಿಹರಿಸಿ ಉತ್ತಮ ಸಮನ್ವಯ ಕಾಯ್ದುಕೊಳ್ಳಲು ಪಿಲಿಕುಳ ಮೃಗಾಲಯವನ್ನು ಕರ್ನಾಟಕ ಅರಣ್ಯ ಇಲಾಖೆಗೆ ವರ್ಗಾಯಿಸಲು ಸೂಚಿಸಲಾಗಿತ್ತು. ಪಿಲಿಕುಳ ಮೃಗಾಲಯದ ನಿರ್ದೇಶಕರ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಪ್ರಾಣಿಗಳ ಪಾಲನೆ- ಪೋಷಣೆ ಹಾಗೂ ಮೃಗಾಲಯ ನಿರ್ವಹಿಸುವುದು ಹಣಕಾಸಿನ ಕೊರತೆಯಿಂದ ಕಷ್ಟವಾಗಿದೆ. ಮಾನವ- ವನ್ಯಜೀವಿ ಸಂಘರ್ಷವನ್ನು ನಿಭಾಯಿಸುವ ಮೂಲ ಸೌಕರ್ಯಗಳಿಲ್ಲದ ಕಾರಣದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃಗಾಲಯ ವನ್ನು ನಿಭಾಯಿಸುವುದರಲ್ಲಿ ಪರಿಣತಿ ಹೊಂದಿರುವುದರಿಂದ ಪಿಲಿಕುಳ ಉದ್ಯಾನವನದ ಮೃಗಾಲಯವನ್ನು ಸಾರ್ವಜನಿಕರ ಹಿತದೃಷ್ಟಿ, ಪ್ರಾಣಿಗಳ ಸಂರಕ್ಷಣೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಉಪ ಅರಣ್ಯ ಸಂರಕ್ಷಣಾಕಾರಿ ಮಂಗಳೂರು ಪ್ರಾದೇಶಿಕ ವಿಭಾಗ, ಮಂಗಳೂರು ಸುಪರ್ದಿಗೆ ಹಸ್ತಾಂತರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಪಿಲಿಕುಳ ಮೃಗಾಲಯವನ್ನು ರಾಜ್ಯ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸೆಂಟ್ರಲ್ ಝೂ ಕೌನ್ಸಿಲ್ ಆಫ್ ಇಂಡಿಯಾ ಸೂಚನೆ ಬಂದಿದೆ. ಅದರಂತೆ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ. ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲವೂ ಸುಗಮವಾಗಿ ನಡೆದರೆ ಅತೀ ಶೀಘ್ರದಲ್ಲಿ ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ಸುಪರ್ದಿಗೆ ಸೇರಲಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಅವರು ತಿಳಿಸಿದ್ದಾರೆ.

error: Content is protected !!