ಬೆಳ್ತಂಗಡಿ: ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ವಿಭಜಿಸಲು ಶಾಸಕ ಹರೀಶ್ ಪೂಂಜ ಪ್ರಯತ್ನಿಸುತಿದ್ದಾರೆ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ನಗರ ಸಮಿತಿ ಅಧ್ಯಕ್ಷ ಸಲೀಂ ಗುರುವಾಯನಕೆರೆ ಹೇಳಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲೂಕಿನಾದ್ಯಂತ ನಾಲ್ಕು ಪ್ರಮುಖ ಭರವಸೆಗಳ ಗ್ಯಾರಂಟಿ ಕಾರ್ಡ್ ಮನೆ ಮನೆಗಳಿಗೆ ವಿತರಿಸುವ ಕೆಲಸವನ್ನು ಮಾಡುತಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಅದಲ್ಲದೇ ಎ 17 ರಂದು ನಾಮಪತ್ರ ಸಲ್ಲಿಕೆ ಸಂದರ್ಭ ಸೇರಿದ ಬೃಹತ್ ಜನಸ್ತೋಮವನ್ನು ನೋಡಿ ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹತಾಶೆಗೊಂಡಿರುವುದಲ್ಲದೇ ಮುಸ್ಲಿಂ, ದಲಿತ, ಕ್ರೈಸ್ತರ ಮತ ವಿಭಜನೆಗೆ ಸಂಚು ಮಾಡಿದ್ದಾರೆ. ಹಣ ಆಮಿಷಗಳನ್ನು ನೀಡುತ್ತಿದ್ದಾರೆ. ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಒಂದು ದೊಡ್ಡ ಸಮುದಾಯವೇ ಕಾಂಗ್ರೆಸ್ ಪಕ್ಷದ ಕಡೆಗೆ ವಾಲಿದೆ ಎಂದು ತಿಳಿದ ಹರೀಶ್ ಪೂಂಜ ಅವರು ಮುಸ್ಲಿಂ ಸಮುದಾಯದ ಮತವನ್ನು ವಿಭಜನೆ ಮಾಡುವ ಉದ್ದೇಶದಿಂದ ಎಸ್ವೈಎಸ್ ಸಂಘಟನೆಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಬಲ್ಲ ಮೂಲಗಳಿಂದ ತಿಳಿದ ಪ್ರಕಾರ ರಾತ್ರಿ ವೇಳೆ ಹರೀಶ್ ಪೂಂಜ ಇದ್ದಲ್ಲಿಗೆ ಜೆಡಿಎಸ್ ಅಭ್ಯರ್ಥಿಯನ್ನು ಕರೆಸಿ “ನೀವು ಜೆಡಿಎಸ್ನಿಂದ ಸ್ಪರ್ಧಿಬೇಕು” ಎಂದಿದ್ದಾರೆ.
ಬೆಳ್ತಂಗಡಿಯಲ್ಲಿ ಮುಸ್ಲಿಂ ಯುವಕರ 2 ತಂಡ ರಚಿಸಿ ಒಂದು ತಂಡವನ್ನು ತಾಲೂಕಿನ ಬಡ ಮುಸ್ಲಿಂರ ಮನೆಗೆ ಕಳುಹಿಸಿ ಜಿಲ್ಲೆಯ ಉದ್ಯಮಿಯೊಬ್ಬರು ಬಡವರನ್ನು ಅಜ್ಮೀರ್ ಯಾತ್ರೆಗೆ ಹಾಗೂ ತಮಿಳುನಾಡಿನ ಮುತ್ತುಪೇಟೆಗೆ ಕಳುಹಿಸಲು ಹರಕೆ ಹೊತ್ತಿದ್ದಾರೆ. ನೀವು ಹೊರಡುವಿರಾದರೆ 7 ಹಾಗೂ 8ರಂದು ರೈಲು ಟಿಕೆಟ್ ಮಾಡಿ, ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚುನಾವಣೆಗೂ ಮೊದಲೇ ಅವರನ್ನೆಲ್ಲಾ ಹೊರ ಜಿಲ್ಲೆಗೆ ಕಳುಹಿಸಿ ಚುನಾವಣೆ ಮುಗಿದ ನಂತರ ವಾಪಸ್ ಕರೆಸಿಕೊಳ್ಳುವ ತಂತ್ರ ನಡೆದಿದೆ. ಆದ್ದರಿಂದ ಯಾರೂ ಕೂಡ ಆಮಿಷಗಳಿಗೆ ಬಲಿಯಾಗದೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತವನ್ನು ಯಾರಿಗೂ ಮಾರಿಕೊಳ್ಳಬೇಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಅಧ್ಯಕ್ಷ ಅಶ್ರಫ್ ನೆರಿಯ, ಮಹಮ್ಮದ್ ರಫಿಕ್, ಪಿಟಿ ಸೆಬಾಸ್ಟಿನ್, ಪ್ರಶಾಂತ್ ವೇಗಸ್, ಹಾಜಿರಾ ಉಪಸ್ಥಿತರಿದ್ದರು.