ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ವರ್ಷದ ಪಟ್ಟಾಷೇಕ ವರ್ಧಂತ್ಯುತ್ಸವ ಸಡಗರ : ಈ ಬಾರಿಯ ಸಂಭ್ರಮ ಹೆಚ್ಚಿಸಿದ ರಾಜ್ಯಸಭಾ ಸದಸ್ಯ ಗೌರವ:

 

 

 

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 55ನೇ ವರ್ಧಂತ್ಯುತ್ಸವವು ಇಂದು ಧರ್ಮಸ್ಥಳದಲ್ಲಿ ಸಂಭ್ರಮ-ಸಡಗರದಿಂದ ನಡೆಯಲಿದೆ.
ದೇವಸ್ಥಾನ ಮತ್ತು ಬಸದಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಳದ ನೌಕರರು, ಊರಿನ ನಾಗರಿಕರು, ಭಕ್ತರು, ವಿವಿಧ ಸಂಸ್ಥೆಗಳ ನೌಕರರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು.
ಬೀಡು (ಹೆಗ್ಗಡೆಯವರ ನಿವಾಸ), ದೇವಸ್ಥಾನ, ವಸತಿ ಛತ್ರಗಳನ್ನು ಆಕರ್ಷಕ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣವಿದೆ.

 

 

ಸಂಜೆ ನಾಲ್ಕು ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ಹೆಗ್ಗಡೆಯವರ ಅಭಿನಂದನಾ ಸಮಾರಂಭ ನಡೆಯಲಿದೆ.
ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.
ಶಾಸಕರುಗಳಾದ ಕೆ. ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು.
ಹಿರಿಯ ನೌಕರರ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನೆ ಹಾಗೂ ಸಾಂಸ್ಕøತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

 

ಸಾಧನೆಗಳ ಸರದಾರ:

1948ರ ನವಂಬರ್ 25 ರಂದು ಅಂದಿನ ಧರ್ಮಾಧಿಕಾರಿಗಳಾಗಿದ್ದ ಕೀರ್ತಿ ಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ ವೀರೇಂದ್ರ ಕುಮಾರ್ 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ 21ನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು.
ಎಂಟು ಶತಮಾನಗಳಿಂದ ನಡೆಯುತ್ತಿದ್ದ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನದೊಂದಿಗೆ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ, ಕಲ್ಯಾಣ ಮಂಟಪಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಯುರ್ವೇದ, ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗ ವಿಜ್ಞಾನಕ್ಕೆ ಕಾಯಕಲ್ಪ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಮೊದಲಾದ ಹತ್ತು ಹಲವು ಯೋಜನೆಗಳನ್ನು ದೇಶದೆಲ್ಲೆಡೆ ಆರಂಭಿಸಿದರು.
ಇವರ ಸೇವೆ-ಸಾಧನೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರ ಮೋದಿಯವರೆ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಧರ್ಮಸ್ಥಳಕ್ಕೆ ಸಂದ ಗೌರವವಾಗಿದೆ.
ಸಂಪ್ರದಾಯದಂತೆ ಪಟ್ಟಾಭಿಷೇಕ ವರ್ಧಂತಿ ದಿನ ಹೆಗ್ಗಡೆಯವರು ತಮ್ಮ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ.

error: Content is protected !!