ವಿದ್ಯಾರ್ಥಿಗಳು ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು : ವಸಂತ ಬಂಗೇರ. ಬೆಳ್ತಂಗಡಿ ಗುರುದೇವ ಪ್ರ.ದ.ಕಾಲೇಜಿನಲ್ಲಿ ಭಿತ್ತಿ ಪತ್ರಿಕೆ ಉದ್ಘಾಟನೆ:

 

 

ಬೆಳ್ತಂಗಡಿ  : ‘ವಿದ್ಯಾರ್ಜನೆಯೊಂದೇ ವಿದ್ಯಾರ್ಥಿ ಬದುಕಿನ ಗುರಿಯಾಗಿರಬಾರದು. ತನ್ನನ್ನು ತಾನು ಬೆಳೆಸಿಕೊಳ್ಳಲು ಕಾಲೇಜಿನ ಒಳಗಿನ ವಾತಾವರಣದ ಮಧ್ಯೆ ಸಿಗುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ಶ್ರೀ ಗುರುದೇವ ವಿದ್ಯಾಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಆ 01 ಸೋಮವಾರ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವತಿಯಿಂದ ‘ಜ್ಞಾನ ಸಂಗಮ’ ಹಾಗೂ ‘ಸ್ಟೂಡೆಂಟ್ ಫಲ್ಸ್ ‘ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ಬದುಕು ಅವಕಾಶಗಳ ಸಾಗರ. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದ ಜೊತೆಗೆ ಶಿಸ್ತು ಮತ್ತು ಸಂಸ್ಕಾರ ಕಲಿಸುವ ಕೇಂದ್ರ ಶಿಕ್ಷಣ ಸಂಸ್ಥೆ. ಇಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಕಾಣಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಪ್ರತಿಭೆಗೆ ಸದಾ ಪ್ರೋತ್ಸಾಹ ನೀಡಲು ಬದ್ಧ ಎಂದರು.

ಮುಖ್ಯ ಅತಿಥಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ ಶಿರ್ಲಾಲ್ ಮಾತನಾಡಿ, ‘ಬರವಣಿಗೆ ಬದುಕು ರೂಪಿಸುವ ಕಲೆ. ಉತ್ತಮ ಬರವಣಿಗೆಯಿಂದ ನಮ್ಮ ವ್ಯಕ್ತಿತ್ವ ಅನಾವರಣವಾಗುವುದು. ಶಾಲಾ ಕಾಲೇಜುಗಳ ಮಧ್ಯೆ ಸಿಗುವ ಭಿತ್ತಿ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರದೆ ನಾಳೆಯ ಸಮಾಜದ ಶ್ರೇಷ್ಠ ಬರಹಗಾರರಾಗಿ, ಸಾಹಿತಿಗಳಾಗಿ ಮೂಡಿ ಬರುವ ನೆಲೆಯಲ್ಲಿ ಭಿತ್ತಿ ಪತ್ರಿಕೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ‘ವಿದ್ಯಾರ್ಥಿಗಳ ಪ್ರತಿಭೆಗೆ ಕಾಲೇಜಿನ ಒಳಗೆ ಅನೇಕ ಸಂಘಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರಲ್ಲಿ ದುಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕಾಲೇಜಿನಲ್ಲಿ 6 ವರ್ಷ ಕಾಲ ರಾಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಹರಿಣಾಕ್ಷಿಯವರನ್ನು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಬಿ ಶಿರ್ಲಾಲ್ ಇವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶಮೀವುಲ್ಲಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜ ಪ್ರಸಾದ್ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿಯರಾದ ಪವಿತ್ರಾ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ಕೆ ವಂದಿಸಿದರು.

error: Content is protected !!