ತಾಯಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮೊಬೈಲ್ ನೀಡದ ವಾರ್ಡನ್: ಮನನೊಂದ ವಿದ್ಯಾರ್ಥಿ ಡೆತ್​​ನೋಟ್‌ ಬರೆದಿಟ್ಟು,  ಆತ್ಮಹತ್ಯೆ : ಮಂಗಳೂರಿನ ಉಳ್ಳಾಲದಲ್ಲಿ ನಡೆದ ಘಟನೆ

 

 

ಮಂಗಳೂರು: ಜನುಮದಿನದಂದು ತನ್ನ ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಇಡೀ ದಿನವೂ ಹಾಸ್ಟೆಲ್‌ ವಾರ್ಡನ್‌ ಮೊಬೈಲ್‌ ನೀಡಲಿಲ್ಲ ಎಂದು ಮನನೊಂದ ವಿದ್ಯಾರ್ಥಿ ಡೆತ್​​ನೋಟ್‌ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ಯಾ ಶಾರದಾ ವಿದ್ಯಾನಿಕೇತನದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜೂ 11 ಶನಿವಾರ ಬಾಲಕನ ತಾಯಿಯ ಹುಟ್ಟಿದ ದಿನವಾಗಿತ್ತು. ಮನೆಯವರ ಜೊತೆ ಮಾತನಾಡಲು ಮೊಬೈಲ್‌ ಕೇಳಿದಾಗ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್‌ ವಾರ್ಡನ್‌ ತಿರಸ್ಕರಿಸಿದ್ದರು. ಎನ್ನಲಾಗುತ್ತಿದೆ.ಮನೆ ಮಂದಿಯೂ ಕೂಡ ವಿದ್ಯಾರ್ಥಿಯನ್ನು ಸಂಪರ್ಕಿಸಲು ಸುಮಾರು ಬಾರಿ ಕರೆ ಮಾಡಿದ್ದರೂ ವಾರ್ಡನ್‌ ಮಾತನಾಡಲು ಅವಕಾಶ ಮಾಡಿಕೊಟ್ಟಿರಲಿಲ್ಲ ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಬಾಲಕ ಹಾಸ್ಟೆಲ್‌ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಡೆತ್‌ ನೋಟಲ್ಲಿ ಏನಿದೆ ?

ತಾಯಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್​​ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಕೂಗಬೇಡಿ ಎಂದು ಬಾಲಕ ಇಂಗ್ಲಿಷ್​ನಲ್ಲಿ ಬರೆದಿರುವ ಡೆತ್‌ ನೋಟ್​​ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಾಗ ಇತರ ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರಮುಖರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!