ಬೆಳ್ತಂಗಡಿ: ವಿದ್ಯುತ್ ತಂತಿಗೆ ತಾಗುವಂತಿದ್ದ ತೆಂಗಿನ ಗರಿ ತುಂಡರಿಸುವ ಸಂದರ್ಭ ಅಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಮೂರ್ಛೆ ತಪ್ಪಿ ಬಿದ್ದ ಯುವಕನಿಗೆ ಸ್ಥಳೀಯ ಯುವಕನೊಬ್ಬ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಪಾಯದಿಂದ ಪಾರು ಮಾಡಿದ ಘಟನೆ ಶನಿವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕುಂಟಿನಿ ಬಳಿ ನಡೆದಿದೆ.
ಕುಂಟಿನಿ ಸಮೀಪ ರಿಜ್ವನ್ ಅವರು ತಮ್ಮ ಮನೆ ಸಮೀಪ ತೆಂಗಿನ ಮರದ ಗರಿ ವಿದ್ಯುತ್ ತಂತಿಗೆ ಬೀಳುವ ಸಂಭವವಿದ್ದುದನ್ನು ಗಮನಿಸಿ, ಅದನ್ನು ತುಂಡಾರಿಸಲು ಯತ್ನಿಸಿದ್ದಾರೆ. ಈ ವೇಳೆ ಗರಿ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ರಿಜ್ವಾನ್ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದು ಮೂರ್ಛೆ ತಪ್ಪಿದ್ದರೆನ್ನಲಾಗಿದೆ. ಸಮೀಪದಲ್ಲೇ ಪೈಂಟ್ ಕೆಲಸ ಮಾಡುತ್ತಿದ್ದ ಆಸಿಫ್ ಅವರಿಗೆ ವಿಚಾರ ತಿಳಿದಿದ್ದು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ರಿಜ್ವಾನ್ ಅವರನ್ನು ಬದುಕಿಸಲು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ತನ್ನ ಬಾಯಿಂದ ಕೃತಕ ಉಸಿರಾಟ ನೀಡಿ ಅವರನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಬಳಿಕ ರಿಜ್ವಾನ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸೀಫ್ ಅವರ ಈ ಮಾನವೀಯ ಹಾಗೂ ಜೀವ ಉಳಿಸಿದ ಸಕಾಲಿಕ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.