ಜೀವದ ಹಂಗು ತೊರೆದು ಶ್ರಮಿಸುತ್ತಿರುವ ದಾದಿಯರ ರಕ್ಷಣೆಗೆ ಸದಾ ಸಿದ್ಧ: ಶಾಸಕ ಹರೀಶ್ ಪೂಂಜ: ಬೆಳ್ತಂಗಡಿಯ 22 ದಾದಿಯರಿಗೆ ತಲಾ ₹10 ಸಾವಿರ ಪ್ರೋತ್ಸಾಹಕರ ಧನ ವಿತರಣೆ: ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನ ಅರ್ಥಪೂರ್ಣ ಆಚರಣೆ

ಬೆಳ್ತಂಗಡಿ: ಸೇವೆಯಲ್ಲಿ ದೇವರನ್ನು ಕಾಣುತ್ತ ಪ್ರೀತಿಯಿಂದ ಉಪಚಾರ ಮಾಡಿ ರೋಗಿಗಳ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಅದರಲ್ಲೂ ಮಹಾಮಾರಿ ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ದಾದಿಯರ ಸೇವೆ ಅನನ್ಯ. ವೈದ್ಯರು ಮತ್ತು ರೋಗಿಗಳ ನಡುವೆ ಕೊಂಡಿಯಾಗಿ ದಾದಿಯರು ಶ್ರಮಿಸುತ್ತಿದ್ದಾರೆ. ತಮ್ಮ ಹಾಗೂ ಮನೆಯವರ ರಕ್ಷಣೆಯೊಂದಿಗೆ ರೋಗಿಗಳ ಸೇವೆ ಮಾಡುವ ದಾದಿಯರ ರಕ್ಷಣೆಗೆ ನಾನು ಸದಾ ಸಿದ್ಧನಾಗಿದ್ದು ದಾನಿಗಳ ನೆರವಿನಿಂದ 22 ದಾದಿಯರಿಗೆ ತಲಾ ಹತ್ತು ಸಾವಿರದಂತೆ ಪ್ರೋತ್ಸಾಹಕ ಧನ ನೀಡಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.


ಅವರು ಬುಧವಾರ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನದ ಅಂಗವಾಗಿ ಸರಕಾರಿ ಸಾರ್ವಜನಿಕ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 22 ಮಂದಿ ದಾದಿಯರಿಗೆ ದಾನಿಗಳ ಸಹಕಾರದಿಂದ ತಲಾ ಹತ್ತು ಸಾವಿರದಂತೆ ಪ್ರೋತ್ಸಾಹಧನ ವಿತರಿಸಿ, ದಾದಿಯರನ್ನು ಗೌರವಿಸಿ ಮಾತನಾಡಿದರು.


ದಾದಿಯರು ಯಾವುದೇ ರೀತಿಯ ಆತಂಕ ಪಡದೆ ತಮ್ಮ ಕರ್ತವ್ಯವನ್ನು ನಿರ್ವಹಿಸಿ. ಏನಾದರೂ ಕಿರುಕುಳ, ಸಮಸ್ಯೆಗಳು ಬಂದಲ್ಲಿ ನನ್ನನ್ನು ಸಂಪರ್ಕಿಸಿ. ನಿಮಗೆ ರಕ್ಷಣೆ ಕೊಡಲು ಸಿದ್ಧ ಎಂದರು.


ಕ್ಷೇತ್ರ ಆರೋಗ್ಯ ಶಿಕ್ಷಾಧಿಕಾರಿ ಅಮ್ಮಿ ಮಾತನಾಡಿ ನನ್ನ 30 ವರ್ಷಗಳ ಅನುಭವದಲ್ಲಿ ದಾದಿಯರನ್ನು ಈ ರೀತಿ ಗೌರವಿಸಿರುವುದು ಪ್ರಥಮವಾಗಿದೆ. ಎಲ್ಲಾ ದಾದಿಯರ ಪರವಾಗಿ ಶಾಸಕ ಹರೀಶ್ ಪೂಂಜಾರವರನ್ನು ಅಭಿನಂದಿಸುವುದಾಗಿ ತಿಳಿಸಿದರು.


ಶುಶ್ರೂಷಕ ಅಧೀಕ್ಷಕಿ ಜೋಯ್ಸ್ ಫೆರ್ನಾಂಡೀಸ್ ಮಾತನಾಡಿ, ಕೊರೊನಾ ಸಂದರ್ಭಲ್ಲಿ ನಮ್ಮನ್ನು ಗೌರವಿಸಿಸರುವುದು ಅಭಿನಂದನೀಯ. ಇನ್ನಷ್ಟು ಕೆಲಸ ಮಾಡಲು ಕೊರತೆ ಇರುವ ಸ್ಟಾಪ್ ನರ್ಸ್‌ಗಳನ್ನು ಮತ್ತು ಡಿ.ದರ್ಜೆ ನೌಕರರನ್ನು ನಿಯೋಜನೆಗೊಳಿಸಬೇಕು. ಇನ್ನಷ್ಟು ರೋಗಿಗಳ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು. ಜಿಲ್ಲಾಧಿಕಾರಿಯವರ ಬಳಿ ಮಾತನಾಡಿ ಅಗತ್ಯತೆ ಇರುವ ನರ್ಸ್‌ಗಳ ಹಾಗೂ ಡಿ ದರ್ಜೆ ಸಿಬ್ಬಂದಿಗಳ ನಿಯೋಜಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು, ಪ.ಪಂ. ಶರತ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ ಮತ್ತು ತುಕರಾಮ್, ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಮತ್ತು ಗಣೇಶ್ ಗೌಡ, ಮೇಲಂತಬೆಟ್ಟು ಗ್ರಾ.ಪಂ. ಸದಸ್ಯ ಚಂದ್ರರಾಜ್, ಲಾಯಿಲ ಗ್ರಾ.ಪಂ. ಸದಸ್ಯ ಅರವಿಂದ, ಆಸ್ಪತ್ರೆಯ ದಾದಿಯರು ಉಪಸ್ಥಿತರಿದ್ದರು. ಆಪ್ತ ಸಮಾಲೋಚಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!