ಬೆಳ್ತಂಗಡಿ: ಅಧುನಿಕವಾಗಿ ಸಮಾಜ ಮುಂದುವರಿಯುತಿದ್ದರೂ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಹೆಚ್ಚಿನ ಎಚ್ಚರಿಕೆ ವಹಿಸಿಕೊಳ್ಳದಿರುವುದು ಅತಂಕಕಾರಿ ಇದರ ಬಗ್ಗೆ ಮಕ್ಕಳಿಗೆ ಮನೆಯವರು ತಿಳಿ ಹೇಳಬೇಕು ಎಂದು ಬೆಳ್ತಂಗಡಿ ರೋಟರಿ ಅ್ಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾಲಿ ಡೋಂಗ್ರೆ ಹೇಳಿದರು. ಅವರು ಲಾಯಿಲ ಗ್ರಾಮ ಪಂಚಾಯತ್ ಆಯೋಜಿಸಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೆಣ್ಣು ಮಕ್ಕಳು ಕೆಲವೊಂದು ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇದು ಮುಂದಿನ ದಿನಗಳಲ್ಲಿ ಅವರಿಗೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಅದ್ದರಿಂದ ಹೆಣ್ಣು ಮಕ್ಕಳಿಗೆ ತಾಯಿ ಉತ್ತಮ ಗೆಳತಿ ಇದ್ದಂತೆ ಅವರಲ್ಲಿ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಅದಕ್ಕೆ ಬೇಕಾದಂತಹ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ ಇದರ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿ.ಪಂ ಸದಸ್ಯೆ ಸೌಮ್ಯ ಜಯಂತ ಗೌಡ ಮಾತನಾಡಿ ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದಭಾವ ಮಾಡಬಾರದು ಹೆಣ್ಣು ಮಕ್ಕಳು ಈಗ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆಯನ್ನು ಮಾಡುತಿದ್ದಾರೆ .ಹೆಣ್ಣಿನ ಬಗ್ಗೆ ಯಾರೂ ಕೀಳರಿಮೆ ಹೊಂದದೆ ಅವರಿಗೆ ಪ್ರೋತ್ಸಾಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರತ್ನಾವತಿ ಮಾಹಿತಿ ನೀಡಿ ಈಗಾಗಲೇ ಸರಕಾರ ಹೆಣ್ಣು ಮಕ್ಕಳಿಗೆ ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯನ್ನು ಜಾರಿಗೆ ತಂದಿದೆ. ಶಿಕ್ಷಣವಲ್ಲದೆ ಇನ್ನಿತರ ಯೋಜನೆಗಳನ್ನೂ ಜಾರಿಗೆ ತಂದಿವೆ ಇದರ ಬಗ್ಗೆ ಈಗಾಗಲೇ ಅಂಗನವಾಡಿಗಳಲ್ಲಿ ಹಾಗೂ ಶಾಲೆಗಳಲ್ಲಿ ಮಾಹಿತಿಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬೇಕು.ಮನೆಯಲ್ಲಿ ತಂದೆ ತಾಯಿ ಹದಿಹರೆಯದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಇಲಾಖೆಗಳು ಈ ಬಗ್ಗೆ ಅಲ್ಲಲ್ಲಿ ಮಾಹಿತಿ ಕಾರ್ಯಗಾರಗಳನ್ನು ಅಯೋಜಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಮನೆಯಲ್ಲೆನಾದರೂ ದೊಡ್ಡವರು ಬುದ್ಧಿ ಮಾತು ತಿಳಿ ಹೇಳಿದರೆ ಅದನ್ನು ಸರಿಯಾಗಿ ಪಾಲಿಸಿಕೊಂಡು ಯಾವುದೇ ಗೊಂದಲಕ್ಕೊಳಪಡದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈಗಾಗಲೇ ಬಾಲ್ಯ ವಿವಾಹ, ಅತ್ಯಾಚಾರ, ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆ ಕಠಿಣವಾದ ಕಾನೂನನ್ನು ಸರ್ಕಾರ ತಂದಿದೆ . ಹೆಣ್ಣು ಮಕ್ಕಳನ್ನು ಎಲ್ಲರೂ ಗೌರವಿಸಿ ಭಯಮುಕ್ತ ಸಮಾಜ ನಿರ್ಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಸದಸ್ಯೆ ಅಶಾ ಬೆನಡಿಕ್ಟ ಸಲ್ಡಾನ ಹೆಣ್ಣು ಎಂದರೆ ಎಲ್ಲೊ ಒಂದು ಕಡೆ ಹುಟ್ಟಿ ಇನ್ನೊಂದು ಕಡೆ ಸೇರುವ ನದಿ ಇದ್ದಂತೆ ನಮ್ಮ ತಾಯಿ ಮನೆಯಲ್ಲಿ ಹುಟ್ಟಿ ಗಂಡನ ಮನೆಗೆ ಸೇರುವ ಹೆಣ್ಣು ಮಕ್ಕಳು ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರುಗಳಾದ ಪ್ರಸಾದ್ ಶೆಟ್ಟಿ ಎಣಿಂಜೆ, ಅಶಾಲತಾ, ಸುಗಂಧಿ, ಜಯಂತಿ, ರೋಟರಿ ಅ್ಯನ್ಸ್ ಕ್ಲಬ್ ಸದಸ್ಯರುಗಳಾದ ರಾಜಶ್ರೀ ಧನಂಜಯ ರಾವ್ ,ರಶ್ಮೀ ಯೋಗೀಶ್ ಬೀಢೆ, ವೈಷ್ಣವೀ ಪ್ರಭು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಶಿಕ್ಷಕ ವೃಂದ,ಶಾಲಾ ಮಕ್ಕಳು,ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ, ಸ್ವಾಗತಿಸಿದರು. ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.ಲೆಕ್ಕ ಪರಿಶೋಧಕಿ ರೇಶ್ಮಾ ಮ ಗಂಜಿಕಟ್ಟಿ ಸಹಕರಿಸಿದರು.