ಉಜಿರೆಯಲ್ಲಿ ಪರಿವರ್ತನೆಯಾದಲ್ಲಿ ಆದರ್ಶ ಗ್ರಾಮ ನಿರ್ಮಾಣ: ಸಂಸದ ನಳಿನ್ ಕುಮಾರ್: ಬಿ.ಜೆ.ಪಿ. ಗ್ರಾ.ಪಂ. ಮಟ್ಟದ ಕುಟುಂಬ ಮಿಲನ

ಉಜಿರೆ: ರಾಷ್ಟ್ರಾದ್ಯಂತ ಬಿ.ಜೆ.ಪಿ. ಅಭಿವೃದ್ಧಿಯ ಸಂಕಲ್ಪ ಮಾಡಿದೆಯೇ ಹೊರತು ರಾಜಕಾರಣ ನಮ್ಮ ಗುರಿಯಲ್ಲ. ನಾವು ಯಾರನ್ನೂ ಟೀಕೆಮಾಡಲು ಬಯಸುವುದಿಲ್ಲ. ಇದು ಕೇವಲ ಕುಟಂಬ ಮಿಲನವಲ್ಲ, ಸಂಕಲ್ಪ ಸಮಾವೇಶ. ಈ ಬಾರಿ ಉಜಿರೆಯಲ್ಲಿ ಪರಿವರ್ತನೆ ಮಾಡಿಯೇ ಸಿದ್ಧ. ಉಜಿರೆಯಲ್ಲಿ ಪರಿವರ್ತನೆಯಾಗಿ ಗ್ರಾ.ಪಂ, ಚುಣಾವಣೆಯಲ್ಲಿ 34 ಸ್ಥಾನಕ್ಕೆ 34 ಸ್ಥಾನಗಳನ್ನೂ ಗೆಲ್ಲಿಸಿದರೆ, ಈ ಬಾರಿ ಉಜಿರೆಯನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಲಿದ್ದೇನೆ. ಜನತೆ ಆಶೀರ್ವಾದ ಮಾಡಿ ಬಿಜೆಪಿ ಕಾರ್ಯಕರ್ತರನ್ನು ಗೆಲ್ಲಿಸಿದಲ್ಲಿ 3 ವರ್ಷದಲ್ಲಿ ಅಭಿವೃದ್ಧಿ ಮೂಲಕ ಉಜಿರೆಯಲ್ಲಿ ಅಭಿವೃದ್ಧಿ ಶಕೆ ಆರಂಭಿಸುವ ಜೊತೆಗೆ ದೇಶದಲ್ಲೇ ಮಾದರಿ ಗ್ರಾಮವನ್ನಾಗಿ ರೂಪಿಸಲಿದ್ದೇವೆ ಎಂದು ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.


ಅವರು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಉಜಿರೆ ಮಹಾಶಕ್ತಿಕೇಂದ್ರ ಹಮ್ಮಿಕೊಂಡಿದ್ದ ಉಜಿರೆ ಗ್ರಾಮಪಂಚಾಯತ್ ಮಟ್ಟದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ಮುಖ್ಯಂತ್ರಿಗಳನ್ನು ಕಾಡಿ ಬೇಡಿ ಅನುದಾನ ತರುತ್ತಾರೆ, ಅದೇ ರೀತಿ ಉಜಿರೆಯಲ್ಲಿ ಬಿ.ಜೆ.ಪಿ. ಗೆದ್ದಲ್ಲಿ ನಾನು ಪ್ರಧಾನಿಯವರ ಬಳಿ ತೆರಳಿ ಅನುದಾನ ಬಿಡುಗಡೆ ಮಾಡಿಸಲಿದ್ದೇನೆ. ಸಾಮಾನ್ಯ ಕಾರ್ಯಕರ್ತರನ್ನೂ ಮುನ್ನೆಲೆಗೆ ತರುವ ಉದ್ದೇಶದಿಂದ ಕುಟುಂಬ ಮಿಲನ ಹಮ್ಮಿಕೊಂಡಿದ್ದು, ಈ ಬಾರಿ ಬೃಹತ್ ಸಮಾವೇಶವಾಗಿ ರೂಪುಗೊಂಡಿದೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆ ದೃಷ್ಟಿಯಿಂದ ಸಾಮಾನ್ಯ ಕಾರ್ಯಕರ್ತರನ್ನೂ ತಲುಪಲು ಕುಟುಂಬ ಸಮ್ಮಿಲನ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಅದೇ ರೀತಿ 27ರಂದು ಯಾತ್ರೆ ಆರಂಭವಾಗಲಿದೆ, ಆದರೆ ಶಾಸಕ ಹರೀಶ್ ಪೂಂಜಾ ಅವರು ಇಲ್ಲಿಯೇ ಯಾತ್ರೆಗೆ ದೊಡ್ಡ ಮಟ್ಟದ ಆರಂಭ ನೀಡುವ ಮೂಲಕ, ಸಮಾವೇಶದ ರೀತಿ ಕಾರ್ಯಕ್ರಮ ಆಯೋಜಿಸಿ, ಹೊಸ ದಿಕ್ಕನ್ನು ನೀಡಿದ್ದಾರೆ. ಉಜಿರೆಯಲ್ಲಿ ಮನೆಯಿಲ್ಲದವರಿಗೆ ಹಕ್ಕುಪತ್ರ ವಿತರಣೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶವಿದೆ ಈ ಎಲ್ಲಾ ಕಾರ್ಯಗಳನ್ನು ಮಾಡಲಾಗುವುದು. ರಾತ್ರಿ ಹಗಲು ಕೆಲಸ ಮಾಡುತ್ತಾ, ಯುವ ನಾಯಕ ಶಾಸಕ ಹರೀಶ್ ಪೂಂಜಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಾರೆ ಅವರಿಗೆ ಸದಾ ಸಹಕಾರ ನೀಡಲಾಗುವುದು ಎಂದರು.
ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದ ದೇಶದ ಮೊದಲ ಪ್ರಧಾನಿ. ಜಗತ್ ಒಂದೇ ಭಾರತ, ಭ್ರಷ್ಟಾಚಾರ ಮುಕ್ತ ಆಡಳಿತ, ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ವಿಚಾರಗಳನ್ನು ಮುಂದಿಟ್ಟು ಗೆದ್ದ ಬಳಿಕ ಅದನ್ನು ಪಾಲಿಸಿದರು. ಇಂದು ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಅಮೇರಿಕಾದಲ್ಲೂ ಮೋದಿ ಸ್ಟಾರ್ ಕ್ಯಾಂಪೇನರ್ ಆದರು. ಅರಬ್ ದೇಶದಲ್ಲೂ ಗಣಪತಿ ಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ಜಗತ್ತಿನಲ್ಲಿ ಭಾರತದ ಕುರಿತು ಚರ್ಚೆಗಳಾಗುತ್ತಿದೆ. ಅಷ್ಟೇ ಏಕೆ, ಪಾಕಿಸ್ಥಾನದ ಲೋಕಸಭೆಯಲ್ಲೂ ಮೋದಿ ಅವರ ಕುರಿತು ಚರ್ಚೆಗಳಾಗುತ್ತಿವೆ. ಚೀನಾ ಆಕ್ರಮಣಕ್ಕೆ ಯತ್ನಿಸಿತು, ಆದರೆ ಮೋದಿ ಕೇವಲ ತಮ್ಮ ಮಾತಿನ ಮೂಲಕ ಚೀನಾ ಸೇನೆ ಹಿಂತಿರುಗುವಂತೆ ಮಾಡಿದರು. ಪ್ರಧಾನಿಗಳು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದರು, ಜೊತೆಗೆ ಶೌಚಾಲಯ, ವಿದ್ಯುತ್, ಮನೆ, ಉಜ್ವಲ ಮೊದಲಾದ ಹತ್ತು ಹಲವು ಯೋಜನೆಗಳ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ನೆರೆ ಸಂದರ್ಭ ಹಾಗೂ ತಾಲೂಕಿನ ಜನರ ಬೇಡಿಕೆ ಈಡೇರಿಕೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಕುಡಿವ ನೀರು, ಒಳಚರಂಡಿ ವ್ಯವಸ್ಥೆಗೆ ಆದ್ಯತೆ:
ಶಾಸಕ ಹರೀಶ್ ಪೂಂಜ ಮತನಾಡಿ, ಉಜಿರೆ ಗ್ರಾ.ಪಂ.ನ ಸಮಸ್ಯೆಗಳ್ನು ಬಗೆಹರಿಸಲು ಪ್ರಯತ್ನಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದಲ್ಲಿ ಹೆಚ್ಚಿನ ಅಭಿವೃದ್ಧಿಕಾರ್ಯ ನಡೆಸಲಾಗುವುದು. ಈಗಾಗಲೇ ರಸ್ತೆ ಅಭಿವೃದ್ಧಿ ಮಾಡಲಾಗಿದೆ, ಸುರ್ಯ ಸಂಪರ್ಕ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ, ಪ್ರತೀ ಬೂತ್ ಅಭಿವೃದ್ಧಿಗೆ ಪ್ರಾಮಾಣಿಕ ಕಾರ್ಯ ನಿರ್ವಹಣೆ ಮಾಡಲಾಗಿದೆ. ಮುಂದೆ ಪ್ರತಿ ರಸ್ತೆ ಅಭಿವೃದ್ಧಿ, ಪ್ರತಿ ಮನೆಗೆ ನೀರು ಮೊದಲಾದ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಉಜಿರೆ ವ್ಯಾಪ್ತಿಯ 300ಕ್ಕಿಂತ ಹೆಚ್ಚು ವಸತಿ ರಹಿತರು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದಲ್ಲಿ ರಾಜೀವ್‍ಗಾಂಧಿ ವಸತಿ ಯೋಜನೆ ಮೂಲಕ ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಪ್ರಧಾನವಾಗಿ ಒಳಚರಂಡಿ ವ್ಯವಸ್ಥೆ, ವಾಕಿಂಗ್ ಮಾಡಲು ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಜೊತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
13 ಮಂದಿಯನ್ನು ಬೂತ್ ಮಟ್ಟದ ಪ್ರಭಾರಿಗಳನ್ನು ನೇಮಿಸಲಾಗಿದ್ದು ಸಂಘಟನೆಯ ಕಾರ್ಯ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷರು ಗ್ರಾಮಮಟ್ಟದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಳಮಟ್ಟದಲ್ಲಿ ಪಕ್ಷ ಅಭಿವೃದ್ಧಿ ಹೊಂದಲು ಕೊಡುಗೆ ನೀಡಿದ್ದಾರೆ. ಅದೇ ರೀತಿ ತಾಲೂಕಿಗೆ 2 ವರ್ಷಗಳ ಅವಧಿಯಲ್ಲಿ 600 ಕೋಟಿ ರೂ. ಬಿಡುಗಡೆಯಾಗುವಲ್ಲಿಯೂ ಸಂಸದರ ಪಾತ್ರ ಮುಖ್ಯವಾದುದು. ಈ ಮೂಲಕ ಅವರು ತಮ್ಮ ಸಂಸದರ ನಿಧಿಯನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ನಂ.1 ಸಂಸದರಾಗಿದ್ದಾರೆ ಎಂದರು.
ಕಾಂಗ್ರೆಸ್‍ನಲ್ಲಿ ನಕಲಿ ಗಾಂಧಿಗಳ ಹಾವಳಿ:
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕೇಂದ್ರ ಸರಕಾರ ಈಗಾಗಲೇ 1.5 ಲಕ್ಷ ನಕಲಿ ಎನ್.ಜಿ.ಓ., 2.5 ಲಕ್ಷ ನಕಲಿ ಪಡಿತರ ಕಾರ್ಡ್ ಬಂದ್ ಮಾಡಿದೆ. ಸುಮಾರು 10 ಲಕ್ಷ ನಕಲಿ ಶಿಕ್ಷಕರು ಕೆಲಸ ಕಳೆದುಕೊಂಡರು. ಇದೀಗ ದೇಶದಲ್ಲಿ ನಕಲಿ ಗಾಂಧಿಗಳ ಹಾವಳಿ ಸೃಷ್ಟಿಯಾಗಿದೆ. ಕಾಂಗ್ರೆಸ್‍ನ ಇತಿಹಾಸವೆಂದರೆ ನಕಲಿ ಗಾಂಧಿಗಳು ಸೃಷ್ಟಿಯಾಗಿರುವುದು. ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರೆಸ್‍ನಲ್ಲಿ ಮಹಾತ್ಮ ಗಾಂಧಿಯ ಇತಿಹಾಸವಿತ್ತು, ಇದೀಗ ನಕಲಿ ಗಾಂಧಿಗಳ ಇತಿಹಾಸವಿದೆ. ದೇಶದಲ್ಲಿ ನಕಲಿ ಜಾತ್ಯಾತೀತತೆ, ಲಂಚ, ಭ್ರಷ್ಟಾಚಾರ ಪಿತೂರಿಗಳ ಇತಿಹಾಸ ಹಗರಣದ ಇತಿಹಾಸ, ಎಲ್ಲದರ ಹಿಂದೆ ಈ ನಕಲಿಗಳ ಹಾವಳಿ ಇದೆ ಎಂದು ಟೀಕಿಸಿದರು.
ರಾಮ- ಲಕ್ಷ್ಮಣರಿಂದ ರಾಮಾಯಣ ಸೃಷ್ಟಿಯಾಯಿತು, ಕೃಷ-ಆರ್ಜುನರಿಂದ ಮಹಾಭಾರತ ಸೃಷ್ಟಿಯಾಯಿತು, ಹಕ್ಕ-ಬುಕ್ಕ ವಿಜಯನಗರ ಸಾರ್ಮಾಜ್ಯ ಸೃಷ್ಟಿಯಾಯಿತು, ಕೋಟಿ- ಚನ್ನಯ್ಯರಿಂದ ತುಳುನಾಡು ಸೃಷ್ಟಿಯಾಯಿತು ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜಾ ಅವರಿಂದ ಬೆಳ್ತಂಗಡಿಯಲ್ಲಿ ಉಜಿರೆ ಗ್ರಾಮ ಪಂಚಾಯತ್ ನಂಬರ್ ವನ್ ಆಗಿ ರೂಪುಗೊಳ್ಳಲಿದೆ. ಈ ಮೂಲಕ ಹೊಸ ಬೆಳಕು ಬೆಳ್ತಂಗಡಿಯಲ್ಲಿ ಆರಂಭವಾಗಿದೆ. ಹರೀಶ್ ಪೂಂಜಾ ಅವರಿಂದಾಗಿ 600 ಕೋಟಿ ರೂ. ಅನುದಾನ ಬಂದಿದೆ. ಯುವಕರ ಶಕ್ತಿ ಅಂತಹುದು, ಜನ ನಿರ್ಧಾರ ಮಾಡಿದರೆ ಉಜಿರೆ ಗ್ರಾ.ಪಂ. ದೇಶದಲ್ಲೇ ಮಾದರಿಯಾಗಲಿದೆ ಎಂದರು.
ಒಂದು ಓಟಿನಿಂದ ಸಮಾಜದ ಬದಲಾವಣೆ:
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಒಂದು ಓಟು ಸಮಾಜದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ನಮ್ಮ ಒಂದು ಓಟು ಶಾಸಕರನ್ನು ಬದಲಾವಣೆ ಮಾಡುವ ಜೊತೆಗೆ ಅಭಿವೃದ್ಧಿ ಪರ್ವ ಆರಂಭಗೊಳ್ಳಲು ಮುನ್ನುಡಿ ಬರೆದಿದೆ. ಬೂತ್ ಮಟ್ಟದಲ್ಲಿಯೇ ಅತಿ ಹೆಚ್ಚು ಅನುದಾನ ಬಿಡುಗಡೆಗೊಳ್ಳುವ ಮೂಲಕ ಅಭಿವೃದ್ಧಿ ನಡೆಯುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ನಮ್ಮ ಓಟಿನಲ್ಲಿದೆ. ಬೆಳ್ತಂಗಡಿಯಲ್ಲಿ ಬದಲಾವಣೆ ತರಬಲ್ಲ ಗ್ರಾ.ಪಂ. ಉಜಿರೆಯಾಗಿದೆ. ಉಜಿರೆಯಲ್ಲಿ ಬದಲಾವಣೆ ಉಂಟಾಗುವ ಮೂಲಕ ಮಾದರಿ ಗ್ರಾಮ ನಿರ್ಮಾಣ ನಡೆಯಬೇಕು ಎಂದರು.
ಕುಟುಂಬ ಮಿಲನ ಕಾರ್ಯಕ್ರಮವನ್ನು ರಘುನಾಥ ಶೆಣೈ ಅವರು ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಡಲ ಪ್ರಭಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರನ್ನು ಉಜಿರೆ ಕೇಂದ್ರ ಭಾಗದಿಂದ ಸಭೆ ನಡೆಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಉಜಿರೆ ಗ್ರಾಮ ಸಮಿತಿ ಕಾರ್ಯಕರ್ತರಿಂದ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ, ಉಜಿರೆ ಮಹಾಶಕ್ತಿಕೇಂದ್ರ ಅಧ್ಯಕ್ಷ ಬಾಬು ಗೌಡ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸೀತರಾಮ ಬೆಳಾಲು, ಧನಲಕ್ಷ್ಮೀ ಜನಾರ್ಧನ್, ಶಶಿಧರ ಕಲ್ಮಂಜ, ಹರೀಶ್ ಸಾಲ್ಯಾನ್, ಸೌಮ್ಯಲತಾ, ಮಮತಾ ಶೆಟ್ಟಿ, ಕುಶಲಪ್ಪ ಗೌಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಗೌಡ, ರೈತ ಮೋರ್ಚಾ ಅಧ್ಯಕ್ಷ ಜಯಂತ ಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕೇಶವ ಭಟ್ ಸ್ವಾಗತಿಸಿ, ರವೀಂದ್ರ ಶೆಟ್ಟಿ ಬಳೆಂಜ ನಿರೂಪಿಸಿದರು. ಶಶಿಧರ ಕಲ್ಮಂಜ ವಂದಿಸಿದರು.

error: Content is protected !!