
ಬೆಳ್ತಂಗಡಿ: ಕೇರಳದಲ್ಲಿ ತಾನು ದುಡಿಯುತಿದ್ದ ಹೊಟೇಲ್ ಮಾಲಕನನ್ನು ಏ.6 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಪೆರ್ದಾಡಿ ನಿವಾಸಿ ಉಮರಬ್ಬ ಎಂಬವರ ಪುತ್ರ ಇರ್ಷಾದ್ (32) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಚಡಯಮಂಗಳ- ಕುರಿಯೋಡು ಸ್ವೈಸಿ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲೀಕ ಶಕೀರ್ ಹುಸೈನ್ ಎಂಬವರನ್ನು ಇರ್ಷಾದ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಬಿರಿಯಾನಿ ಪಾಕ ತಜ್ಞನಾಗಿದ್ದ ಬೆಳ್ತಂಗಡಿಯ ಇರ್ಷಾದ್ ತಾನು ಕೆಲಸ ಮಾಡುತ್ತಿದ್ದ ಹೋಟೇಲ್ಗೆ ಬರುತ್ತಿದ್ದ ಅಕ್ಕಿ ಮೂಟೆಯಲ್ಲಿರುವ 50,100,150 ರೂಪಾಯಿಗಳ ಕೂಪನ್ ಗಾಗಿ ನಡೆದ ಜಗಳದಿಂದ ಈ ಕೃತ್ಯವೆಸಗಿದ್ದಾನೆ. ಅಕ್ಕಿಮೂಟೆಯಲ್ಲಿ ಬರುತ್ತಿದ್ದ ಕೂಪನ್ ಒಟ್ಟು ಸೇರಿಸಿ ಮಾಲಕರಿಗೆ ಕೊಡಬೇಕೆಂದು ಹೊಟೇಲ್ ಮಾಲಕ ಕೇರಳದ ಆಕಲ್ ನಿವಾಸಿ ಶಕೀರ್ ಹುಸೈನ್ ನಿರ್ದೇಶನ ನೀಡಿದ್ದರು. ಅದಾಗ್ಯೂ ಇರ್ಷಾದ್ ಕೂಪನ್ ಗಳನ್ನು ತಾನೇ ಸಂಗ್ರಹಿಸಿಟ್ಟುಕೊಂಡಿದ್ದ. ಇದನ್ನು
ಪ್ರಶ್ನಿಸುವ ಸಲುವಾಗಿ ಪತ್ನಿಯೊಂದಿಗೆ ಆತ ವಿಶ್ರಾಂತಿ ಪಡೆಯುತ್ತಿದ್ದ ವಸತಿ ಗೃಹದ ಎರಡನೇ ಮಹಡಿಗೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇರ್ಷಾದ್ ಚಾಕು ತೆಗೆದು ಮಾಲಕನ ಎದೆಗೆ ಬಲವಾಗಿ ಚುಚ್ಚಿದ್ದಾನೆ ಎನ್ನಲಾಗಿದೆ.
ಹೊಟೇಲ್ ಮಾಲೀಕ ಶಕೀರ್ ಹುಸೈನ್ ನನ್ನು ಏ.6 ರಂದು ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿ ಅದೇ ಹೊಟೇಲ್ನ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗುವಾಗ ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಊರವರ ಸಹಕಾರದಲ್ಲಿ ಬಸ್ ಹತ್ತುವ ವೇಳೆ ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕೊಲ್ಲಂ ಜೈಲಿಗೆ ಕಳುಹಿಸಲಾಗಿದೆ.