ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಿ.ಸಿ. ರೋಡ್ ಸಮೀಪದ ಅಜ್ಜಿ ಬೆಟ್ಟು ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಶಂಭೂರು ಕೊಪ್ಪಳ ನಿವಾಸಿ ಚಿದಾನಂದ( 50) ಎಂದು ಗುರುತಿಸಲಾಗಿದೆ.
ದ್ವಿಚಕ್ರ ಸವಾರ ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಎಂಬಲ್ಲಿ ರಸ್ತೆ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚಿದಾನಂದ ಅವರು ಬಂಟ್ವಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.