ಪಡ್ಲಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿಯ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಜೂ 17 ರಂದು ಶಾಲೆಯಲ್ಲಿ ಸರಳವಾಗಿ ನಡೆಯಿತು. ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶಾಲಾ ನಾಮ ನಿರ್ದೇಶನ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ಮಾನವಿಯಂತೆ ಸದಾನಂದ ಶೆಟ್ಟಿ ಕರ್ನೊಡಿ ಹಾಗೂ ಗುತ್ತಿಗೆದಾರರಾದ ಜಗನ್ನಾಥ ಶೆಟ್ಟಿ ಕರ್ನೊಡಿ ಅವರು ಸುಮಾರು 10 ಸಾವಿರ ರೂಗಳ ಪುಸ್ತಕ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರಸಾದ್ ಶೆಟ್ಟಿ ಬೆಳ್ತಂಗಡಿ ನಗರಕ್ಕೆ ಅತೀ ಸಮೀಪ ಇರುವ ಲಾಯಿಲ ಗ್ರಾಮದ ಪಡ್ಲಾಡಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ನೀಡಬೇಕು. ಖಾಸಗಿ ಶಾಲಾ ಮಕ್ಕಳಂತೆ ನಮ್ಮ ಶಾಲಾ ಮಕ್ಕಳು ಇರಬೇಕು ಎಂಬ ಯೋಚನೆಯೊಂದಿಗೆ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಖರೀದಿಸಲು ಸುಮಾರು 10 ಸಾವಿರ ರೂ ಗಳ ಅವಶ್ಯಕತೆ ಇತ್ತು. ಈ ಬಗ್ಗೆ ನಮ್ಮ ಗ್ರಾಮದವರೇ ಆದಂತಹ ಸದಾನಂದ ಶೆಟ್ಟಿ ಅವರ ಮಗನಾದ ಪ್ರಶಾಂತ್ ಅವರಲ್ಲಿ ಹಾಗೂ ಗುತ್ತಿಗೆದಾರರಾದ ಜಗನ್ನಾಥ ಶೆಟ್ಟಿ ಕರ್ನೊಡಿ ಅವರಲ್ಲಿ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿ ತಲಾ 5 ಸಾವಿರದಂತೆ ನೀಡಿ ಸಹಕಾರ ನೀಡುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಇವರ ಸಹಕಾರಕ್ಕೆ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಸೂರಪ್ಪ ಪಡ್ಲಾಡಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಅವರು ಸ್ವಾಗತಿಸಿ ವಂದಿಸಿದರು.

error: Content is protected !!