‘ಮಹಿಳೆಯರ ಆಂತರಿಕ ಭಾವನೆಗಳ ಹೊರಹೊಮ್ಮುವಿಕೆಗೆ ಸಾಹಿತ್ಯ ಒಂದು ಮಾರ್ಗ: ಆಕೆ ಉತ್ತಮ ಸಾಹಿತ್ಯದತ್ತ ಗಮನವಹಿಸಿ ಮುಂದಿನ ಪೀಳಿಗೆಗೆ ವರದಾನವಾಗಬೇಕು’ ಬೆಳ್ತಂಗಡಿ ವಾಣಿ ಸಂಸ್ಥೆಯ ಕನ್ನಡ ಉಪನ್ಯಾಸಕ ಮಹಾಬಲ ಗೌಡ

ಬೆಳ್ತಂಗಡಿ: ‘ವಿದ್ಯೆ ಇಲ್ಲದಿದ್ದ ಕಾಲದಿಂದಲೂ ಮಹಿಳೆ ತನ್ನ ಆಂತರಿಕ ಭಾವನೆಗಳ ಹೊರಹೊಮ್ಮುವಿಕೆಗೆ ಸಾಹಿತ್ಯವನ್ನು ಒಂದು ಮಾರ್ಗವಾಗಿ ಕಂಡುಕೊಂಡಿದ್ದಾಳೆ’ ಎಂದು ಬೆಳ್ತಂಗಡಿ ವಾಣಿ ವಿದ್ಯಾಲಯದ ಕನ್ನಡ ಉಪನ್ಯಾಸಕರಾಗಿರುವ ಮಹಾಬಲ ಗೌಡ ಅವರು ಹೇಳಿದರು.

ಅವರು ಉಜಿರೆಯ ಶಾರದಾ ಮಂಟಪದಲ್ಲಿ ಗ್ರಾಮ ಪಂಚಾಯತ್ ಉಜಿರೆ, ಪ್ರೇರಣ ಸಂಜೀವಿನಿ ಒಕ್ಕೂಟ ಉಜಿರೆ, ಇವುಗಳ ಸಹಕಾರದೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೊಂ) ಕರ್ನಾಟಕ, ಬೆಳ್ತಂಗಡಿ ತಾಲೂಕು ಘಟಕ ಇದರ ಮಹಿಳಾ ಪ್ರಕಾರದ ವತಿಯಿಂದ ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಸಾಹಿತ್ಯಕ ಮೌಲ್ಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆ ಪ್ರಲೋಭನೆಗಳಿಗೆ ಒಳಗಾಗದೆ ಉತ್ತಮ ಸಾಹಿತ್ಯದತ್ತ ಗಮನವಹಿಸಿ ಮುಂದಿನ ಪೀಳಿಗೆಗೆ ಆಕೆ ವರದಾನವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಉಜಿರೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಅವರು ಮಾತನಾಡಿ ‘ಮಹಿಳೆ ಈ ಮಣ್ಣಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಸ್ಪಂದಿಸುವ ಮನಸ್ಥಿತಿಯನ್ನು ಹೊಂದಿಕೊಂಡಾಗ ಮಾತ್ರ ಅಂತಹ ಮನೆ ಮತ್ತು ಸಮಾಜ ಸಮೃದ್ಧಿಯತ್ತ ಸಾಗಲು ಸಾಧ್ಯ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಚಟುವಟಿಕೆಯಾಗಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಆಶು ಕವಿತೆ ರಚಿಸುವ ಸ್ಪರ್ಧೆ ಏರ್ಪಡಿಸಲಾಯಿತು. ಬಳಿಕ ಮೂರು ಕವಿತೆಗಳನ್ನು ಆಯ್ದು ಅತ್ಯುತ್ತಮವೆಂದು ಬಹುಮಾನಗಳನ್ನು ವಿತರಿಸಲಾಯಿತು. ಮಹಿಳಾ ಪ್ರಕಾರದ ಸದಸ್ಯೆಯರಿಂದ ರಚಿತವಾದ ಪುಸ್ತಕಗಳನ್ನು ಗ್ರಾಮ ಪಂಚಾಯತ್ ನ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆö ಪುಷ್ಪಾವತಿ ಆರ್ ಶೆಟ್ಟಿ, ಪ್ರೇರಣ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೀಲಾ ಮಹಾಬಲ ಗೌಡ , ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಜಿಲ್ಲಾ ಸಂಯೋಜಕ ಸುಂದರ ಶೆಟ್ಟಿ ಉಪಸ್ಥಿತರಿದ್ದರು.

ಆಶಾ ಅಡೂರ್ ಸ್ವಾಗತಿಸಿ, ವನಜೋಶಿಯವರು ಧನ್ಯವಾದಗಳು ಸಮರ್ಪಿಸಿದರು. ಮಹಿಳಾ ಪ್ರಕಾರದ ಸದಸ್ಯೆ ವಿನುತ ರಜತ್ ಗೌಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!