ಹಿರಿಯ ನೇತಾರ ಪಿ ಡೀಕಯ್ಯ ಸಾವು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಲಿ ಜನಪರ ಸಂಘಟನೆಗಳ ಮುಖಂಡರ ಆಗ್ರಹ

 

 

ಬೆಳ್ತಂಗಡಿ : ಬಹುಜನ ಚಳುವಳಿಯ ಹಿರಿಯ ನೇತಾರ ಪಿ. ಡೀಕಯ್ಯರ ಅಸಹಜ ಸಾವು ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ ಕ್ತಮ ಕೈಗೊಳ್ಳಬೇಕು ಎಂದು ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಈ ಬಗ್ಗೆ ಬುಧವಾರ ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಮಾತನಾಡಿ, ಗರ್ಡಾಡಿಯ ಮನೆಯಲ್ಲಿ ರಕ್ತದ ಮಡುವಿನಲ್ಲಿದ್ದ ಡೀಕಯ್ಯರನ್ನು ಜುಲೈ 7 ರಂದು ಮಧ್ಯಾಹ್ನದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಚಿಕಿತ್ಸೆ ಫಲಕಾರಿಯಾಗದೆ ಅವರು ಜುಲೈ 8 ರಂದು ರಾತ್ರಿ ನಿಧನರಾದರು. ಜುಲೈ 9 ರಂದು ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಆದರೆ ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ತಾಯಿ ಕುಟುಂಬದ ಸದಸ್ಯರು ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಮತ್ತು ಪೊಲೀಸರ ಸಮಕ್ಷಮದಲ್ಲಿ ಡೀಕಯ್ಯ ಅವರ ಮೃತ ದೇಹವನ್ನು ಮಣ್ಣಿನಿಂದ ಹೊರ ತೆಗೆದು ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಡೀಕಯ್ಯರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಂಡಿರುವ ಮತ್ತು ಅವರ ತಲೆ ಬುರುಡೆ ಹಲವೆಡೆ ಒಡೆದಿರುವುದನ್ನು ಸಿ.ಟಿ. ಸ್ಕ್ಯಾನ್ ಮೂಲಕ ಕಂಡುಕೊಂಡಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಡೀಕಯ್ಯರ ನಿಧನರಾದ ಬಳಿಕ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಸಂಬಂಧ ಪಟ್ಟ ವೈದ್ಯರನ್ನು ಕಸ್ತೂರ್ಬಾ ಆಸ್ಪತ್ರೆಯಲ್ಲೇ ಭೇಟಿ ಮಾಡಿ ಡೀಕಯ್ಯರ ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಪ್ರಯತ್ನಿಸಿದಾಗ, ಆ ವೈದ್ಯರು ವಿನಾಕಾರಣ ಸಿಟ್ಟುಗೊಂಡಿದ್ದಲ್ಲದೆ, ಯಾವುದೇ ಸ್ಪಷ್ಟನೆಯನ್ನು ನೀಡಲು ನಿರಾಕರಿಸಿದ್ದಾರೆ ಎಂಬ ಡೀಕಯ್ಯ ಅವರ ತಾಯಿ ಕುಟುಂಬದ ಸದಸ್ಯರ ಆಪಾದನೆಯು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಿಚಾರವಾಗಿದೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಡೀಕಯ್ಯ ಅವರ ಸಾವಿನ ಬಗ್ಗೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹಾಗೂ ಆಸ್ಪತ್ರೆಯ ಸಂಬಂಧಪಟ್ಟ ವೈದ್ಯರ ಕಾನೂನು ವಿರೋಧಿ ನಡವಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ, ಅವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು, ಆ ಮೂಲಕ ಡೀಕಯ್ಯ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲೆಯ ಶೋಷಿತ ಸಮುದಾಯಗಳ ಪರವಾಗಿ ಆಗ್ರಹಿಸುತೇವೆ ಎಂದಿದ್ದಾರೆ.
ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಹಲವಾರು ಅನುಮಾನಗಳು ಕುಡುಂಬದ ಸದಸ್ಯರುಗಳಿಗಿದೆ ಎಂದ ಅವರು ಡೀಕಯ್ಯ ಅವರು ಮೆದುಳಿನ ರಕ್ತಸ್ರಾವದಿಂದ ಮೃತ ಪಟ್ಟಿರುವುದಲ್ಲ ಎಂಬುದು ಹೊರನೋಟಕ್ಕೆ ಸಾಬೀತಾಗುತ್ತಿದೆ ಎಂದರು. ಅವರ ಪತ್ನಿ ದೂರು ನೀಡಲು ಹಿಂಜರಿದಿರುವುದುದಲ್ಲದೆ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುಟುಂಬದವರಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿರುವ ಅವರು ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆಂದು ತಿಳಿದಿಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಡೀಕಯ್ಯ ಅವರ ಕುಟುಂಬದ ಸದಸ್ಯರಿಗೆ ಅವರಿಗೆ ಏನಾಗಿದೆ ಎಂಬ ಸ್ಪಷ್ಟ ಮಾಹಿತಿಯೇ ಅಂತ್ಯ ಸಂಸ್ಕಾರವಾಗುವ ವರೆಗೂ ಇರಲಿಲ್ಲ ಮೆದುಳಿನ ರಕ್ತಸ್ರಾವ ಎಂದೇ ನಂಬಿದ್ದೆವು ಆದರೆ ಬಳಿಕ ಹಲವು ಅನುಮಾನಗಳು ಬಂದಿದ್ದು ಅದಕ್ಕಾಗಿ ದೂರು ನೀಡುವ ಕಾರ್ಯ ಮಾಡಿದ್ದೇವೆ ಎಂದಿದ್ದಾರೆ. ಡೀಕಯ್ಯ ಅವರ ಮರಣ ಸ್ವಾಭಾವಿಕ ಮರಣವಲ್ಲ ಎಂಬುದು ಖಚಿತವಾಗಿದೆ ನಾವು ಯಾವುದೇ ವ್ಯಕ್ತಿಗಳ ಮೇಲೆ ಆರೋಪ ಮಾಡುವುದಿಲ್ಲ ಆದರೆ ಹಲವರ ವರ್ತನೆಗಳು ಅನುಮಾನ ಮೂಡಿಸುವಂತಿದೆ ನಮಗಿರುವ ಅನುಮಾನಗಳನ್ನು ಪೊಲೀಸರ ಮುಂದಿರಿಸಿದ್ದೇವೆ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಿ ನ್ಯಾಯ ಕೊಡಿಸುವ ಭರವಸೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಲಿತ್ ಸೇವಾ ಸಮಿತಿಯ ನೇತಾರ ಬಿ. ಮಣಿ, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ಉರ್ವ ಗಾಂಧಿನಗರ, ಮಂಗಳೂರು ಇದರ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಡೀಕಯ್ಯರ ನಿಕಟವರ್ತಿಗಳಾದ ಅಣ್ಣು ಸಾಧನ, ಪೊಡಿಯಾ, ದಕ್ಷಿಣ ಕನ್ನಡ ಜಿಲ್ಲಾ ಎಸ್.ಸಿ., ಎಸ್.ಟಿ. ಕೈಗಾರಿಕೋದ್ಯಮಿಗಳ ಸಂಘದ ನೇತಾರ ಶಿವಪ್ರಸಾದ್, ಸುಳ್ಯ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತನಿಯ ಕಲ್ತಡ್ಕ, ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಇದ್ದರು.

error: Content is protected !!